ಮಂಗಳೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಫೌಂಡೇಶನ್, ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಸ್ವಚ್ಛ ಮಂಗಳೂರು ಫೌಂಡೇಶನ್ ಇದೀಗ “ಜಿಜ್ಞಾಸಾ – ಸನಾತನ ಚಿಂತನ ಗಂಗಾ” ಎಂಬ ಶೀರ್ಷಿಕೆಯಡಿಯಲ್ಲಿ ದ್ವೈಮಾಸಿಕ ಉಪನ್ಯಾಸ ಮಾಲಿಕೆಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದು ಪ್ರತಿ ಎರಡು ತಿಂಗಳಿಗೆ ಒಂದು ಭಾನುವಾರ ವರ್ತಮಾನ ಜಗತ್ತಿನ ವಿಷಯಗಳ ಬಗ್ಗೆ ದೇಶದ ಪ್ರಸಿದ್ಧ ಭಾಷಣಕಾರರು ಹಾಗೂ ರಾಮಕೃಷ್ಣ ಮಠದ ಸಂತರಿಂದ ಉಪನ್ಯಾಸವನ್ನು ಆಯೋಜಿಸಲು ಉದ್ದೇಶಿಸಿದೆ ಎಂದು ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತೀಯ ಚಿಂತನೆಗಳು, ಜೀವನ ಮೌಲ್ಯಗಳು ಮತ್ತು ಜಾಗತಿಕ ದೃಷ್ಟಿಕೋನಗಳನ್ನು ಮೂಲೆಗುಂಪು ಮಾಡಿದ ವಿದೇಶಿ ಚಿಂತನೆಗಳನ್ನು ಬದಿಗೊತ್ತಿ ನಮ್ಮ ಚಿಂತನೆಗಳಿಗೆ ಅವಕಾಶ ನೀಡುವ ಕೆಲಸ ಸಣ್ಣ ಪ್ರಮಾಣದಲ್ಲಿ ದಶಕದ ಹಿಂದೆ ಪಾರಂಭವಾಯಿತು. ಇತ್ತೀಚೆಗೆ ನಮ್ಮ ದೇಶದ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಭಾರತೀಯ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಸ್ವಾಗತಾರ್ಹ.
ಸನಾತನ ಚಿಂತನ ಗಂಗಾ ಸರಣಿ ಉಪನ್ಯಾಸ ಮಾಲಿಕೆಯನ್ನು ಸಾಮಾಜಿಕ, ಐತಿಹಾಸಿಕ, ಬೌದ್ಧಿಕ, ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದಂತೆ, ಐರೋಪ್ಯ ದೃಷ್ಟಿಕೋನದಿಂದ ಹೊರಬಂದು ಭಾರತೀಯ ಪರಂಪರಿಕ ಜೀವನ ಮೌಲ್ಯಗಳ ನೆಲೆಗಟ್ಟಿನಲ್ಲಿ ಚರ್ಚಿಸಿ, ಹೊಸ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಮಂಗಳೂರಿನ ವೈದ್ಯರು, ಇಂಜಿನಿಯರ್ಸ್, ವಕೀಲರು, ಚಾರ್ಟಡ್ ಅಕೌಂಟೆಂಟ್, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಣ, ತರು, ಕೆಸರು ಚೇಂಬರ್, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಾಧ್ಯಮದವರು ಮುಂತಾದ ನಾಗರಿಕ ಬಂಧುಗಳಿಗೆ ಆಯೋಜಿಸಲಾಗುತ್ತಿದೆ. ಅದೇ ರೀತಿ ಸ್ವಚ್ಛ ಮಂಗಳೂರು 2 ಹಂತದ ಕಾರ್ಯಕ್ರಮ ಹೊಸ ರೂಪದಲ್ಲಿ ಅನುಷ್ಠಾನಗೊಳ್ಳಲಿದ್ದು ಅಕ್ಟೋಬರ್ 2ರಂದು ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಚಿಂತನ ಗಂಗಾ” ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಸಮಾರಂಭವು ಈ ಸೆಪ್ಟೆಂಬರ್ 3 ರಂದು ಮುಂಜಾನೆ 10 ಗಂಟೆಗೆ ಮಂಗಳಾ ದೇವಿ ರಾಮಕೃಷ್ಣ ಮಠ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಸಿದ್ಧ ವಿದ್ವಾಂಸ ಡಾ.ಆನಂದ ರಂಗನಾಥನ್ ಅವರು “India towards 2047 A Land of Opportunities ವಿಷಯದ ಬಗ್ಗೆ ಉಪನ್ಯಾಸ ನೀಡುವರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಎನ್ ವಿನಯ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಂಗಳೂರು ರಾಮಕೃಷ್ಣ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜಿ ದಿವ್ಯ ಸಾನಿಧ್ಯ ವಹಿಸುವರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ರಾಮಕೃಷ್ಣ ಮಠ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ, ಜಿಜ್ಞಾಸ ಸಂಚಾಲಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಜ್ಞಾಸ ಸಹಸಂಚಾಲಕ ಪ್ರೊ. ಧನೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.