ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಮತ್ತು ಶಕ್ತಿ ಪಪೂ ಕಾಲೇಜ್ ಹಾಗೂ ಕ್ರೀಡಾ ಭಾರತಿ ಮಂಗಳೂರಿನ ಜಂಟಿ ಆಶ್ರಯದಲ್ಲಿ ರಥ ಸಪ್ತಮಿಯ ಪ್ರಯುಕ್ತ ನೂರಾರು ವಿದ್ಯಾರ್ಥಿಗಳು ಇಂದು ಬೆಳಗ್ಗೆ ಸೂರ್ಯನಮಸ್ಕಾರವನ್ನು ಮಾಡಿದರು.
ಈ ಕಾರ್ಯಕ್ರಮದ ಉದ್ಘಾಟಣೆಯನ್ನು ದೀಪ ಬೆಳಗಿಸುವುದರ ಮೂಲಕ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಎಸ್ಎಸ್ ನಾಯಕ್ ನೆರವೇರಿಸಿದರು. ನಂತರ ಮಾತನಾಡಿದ ಅವರು ಆರೋಗ್ಯವನ್ನು ಕಾಪಾಡಲು ಯೋಗ ಅತೀ ಅವಶ್ಯಕವಾಗಿದೆ. ನಮ್ಮ ದಿನ ನಿತ್ಯದ ಚಟುವಟಿಕೆಯಲ್ಲಿ ವ್ಯಾಯಾಮ ಮತ್ತು ಯೋಗಾಸನವನ್ನು ಜೋಡಿಸಿಕೊಳ್ಳಬೇಕು. ಇದು ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ.
ಸೂರ್ಯನಮಸ್ಕಾರದಲ್ಲಿ ಸುಮಾರು ೧೨ ಆಸನಗಳ ಮೂಲಕ ಅಭ್ಯಾಸ ಮಾಡಿದಾಗ ಅದರಿಂದ ದೇಹದ ಎಲ್ಲಾ ಭಾಗಗಳಿಗೂ ಸರಿಯಾದ ವ್ಯಾಯಾಮ ಸಿಗಲು ಸಾಧ್ಯವಾಗುತ್ತದೆ. ರಥ ಸಪ್ತಮಿಯ ಆಚರಣೆಯು ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿರುತ್ತದೆ. ನಮ್ಮ ಪೂರ್ವಜರು ಆರೋಗ್ಯದ ಕಡೆಗೆ ಯಾವತ್ತಿಗೂ ಗಮನಕೊಡುತ್ತಾ ಬರುತ್ತಿದ್ದರು. ಆದ್ದರಿಂದ ನಾನು ಈ ದಿನದಿಂದಲೇ ಸೂರ್ಯನಮಸ್ಕಾರದ ಅಭ್ಯಾಸವನ್ನು ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ರೀಡಾ ಭಾರತಿಯ ಜಿಲ್ಲಾ ಅಧ್ಯಕ್ಷರಾದ ಕರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೇಮಾರು, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕಾರ್ಯಕ್ರಮ ನಿರೂಪಣೆಯನ್ನು ಅಧ್ಯಾಪಕರಾದ ಶರಣಪ್ಪ, ಪರಿಚಯವನ್ನು ಭವ್ಯಶ್ರೀ ಅವರು ನೆರವೇರಿಸಿದರು.