ಸುರತ್ಕಲ್: ಕಳೆದ ಜನವರಿ 16ರಂದು ಮಣಪ್ಪುರಂ ಫೈನಾನ್ಸ್ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಶಿವಾನಿ(20) ಪ್ರೀತಿಸುತ್ತಿದ್ದ ಯುವಕನ ಜೊತೆಗೆ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ.
ಘಟನೆಯ ವಿವರ:
ಶಿವಾನಿ ಫೈನಾನ್ಸ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಡಿಜೆ ಆಪರೇಟರ್ ಆಗಿರುವ ಧನುಷ್ ಎಂಬಾತನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಮನೆ ಬಿಟ್ಟು ತೆರಳಿದ್ದಳು. ಹಣವಿಲ್ಲದೆ ಜೋಡಿ ರೈಲಿನ ಮೂಲಕ ಮಡಗಾಂವ್ ಗೆ ಹೋಗಿ ಅಲ್ಲಿ ಮೊಬೈಲ್ ಒಂದನ್ನು ಮಾರಿಬಂದ ಹಣದಲ್ಲಿ ಖರ್ಚು ಮಾಡಿತ್ತು. ಅಲ್ಲಿಂದ ಮುಂದೆ ಜೋಡಿಯು ದೆಹಲಿಗೆ ಹೋಗಿದ್ದು ಅಲ್ಲಿ ಇನ್ನೊಂದು ಮೊಬೈಲ್ ಮಾರಿದ್ದು ಆ ಹಣ ಖರ್ಚು ಆದ ಬಳಿಕ ಅಲ್ಲಿಂದ ಮರಳಿ ಮಡಗಾಂವ್ ಗೆ ಬಂದಿತ್ತು. ಅಲ್ಲಿ ಹಣಕ್ಕಾಗಿ ಸ್ನೇಹಿತರಲ್ಲಿ ಕೇಳಿದ್ದು ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿತ್ತು. ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸುರತ್ಕಲ್ ಪೊಲೀಸರು ಗೂಗಲ್ ಪೇ ನಂಬರ್ ಟ್ರೇಸ್ ಮಾಡಿ ಜೋಡಿಯ ಬೆನ್ನು ಬಿದ್ದು ಪತ್ತೆಹಚ್ಚಿದೆ.
ಯುವತಿ ಪೊಲೀಸ್ ಠಾಣೆಗೆ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಈ ವೇಳೆ ಯುವತಿ ಹೆತ್ತವರು ಅಂಗಲಾಚಿ ಬೇಡಿಕೊಂಡರೂ ಅವರ ಜೊತೆ ಹೋಗಲು ಯುವತಿ ನಿರಾಕರಿಸಿ ಧನುಷ್ ಜೊತೆ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಹೆತ್ತವರು ಹಿಡಿಶಾಪ ಹಾಕಿ ವಾಪಸ್ ಆಗಿದ್ದಾರೆ.