ಮಂಗಳೂರು:ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಬೇಕೆಂದು ಗಣ್ಯರು,ಸಂಘ ಸಂಸ್ಥೆಗಳು,ಸಾರ್ವಜನಿಕರಿಂದ ಮನವಿಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ತುಳು ಭಾಷೆಯ ಕುರಿತಂತೆ ಹಾಲಿ ಇರುವ ನಿಯಮಗಳು, ಕಾನೂನಿನ ಚೌಕಟ್ಟಿನಲ್ಲಿ ಈ ಕುರಿತು ಆಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಿ ವಾಸ್ತವಾಂಶದ ವರದಿಯನ್ನು ಸೂಕ್ತ ಶಿಫಾರಸಿನೊಂದಿಗೆ ಸಲ್ಲಿಸುವಂತೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಕೋರಲಾಗಿತ್ತು.
ತುಳು ಭಾಷೆಯನ್ನು ಕರ್ನಾಟಕ ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಈ ಕೆಳಕಂಡ ಅಧಿಕಾರಿ/ಅಧಿಕಾರೇತರ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.
ಡಾ|| ಮೋಹನ್ ಆಳ್ವ (ಅಧ್ಯಕ್ಷರು), ಕೇಶವ ಬಂಗೇರ ನಾರಾಯಣಗುರು (ಸದಸ್ಯರು), ಡಾ|| ಮಾಧವ ಕೋಣಾಜೆ (ಸದಸ್ಯರು), ಗಣೇಶ್ ಆ ಸಂಕಮಾರೆ ಮಂಗಳೂರು (ಸದಸ್ಯರು), ಪೃಥ್ವಿ ಕವತರ್ ಮಣಿಪಾಲ (ಸದಸ್ಯರು), ವಸಂತಶೆಟ್ಟಿ ಉಡುಪಿ (ಸದಸ್ಯರು), ಚಂದ್ರಹಾಸ ಕಣಂತೂರ್ ಹಿರಿಯ ಕಥೆಗಾರರು ಮತ್ತು ಲೇಖಕರು (ಸದಸ್ಯರು), ಶ್ರೀಮತಿ ಸಂಧ್ಯಾ ಆಳ್ವ (ಸದಸ್ಯರು), ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ನಿರ್ದೇಶಕರು). ಈ ಸಮಿತಿಯು ಅಧ್ಯಯನ ಮಾಡಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಘೋಷಿಸುವ ಕುರಿತು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ