ಮಂಗಳೂರು: ಬಿಜೆಪಿಯನ್ನು ಸೋಲಿಸಬೇಕು. ಇದು ರಾಷ್ಟ್ರೀಯ ಮಟ್ಟದಲ್ಲಿ ಎಡಪಕ್ಷಗಳು ಕೈಗೊಂಡಿರುವ ತೀರ್ಮಾನ. ಹೀಗಾಗಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರಲು ತೀರ್ಮಾನಿಸಿರುವ ಸಿಪಿಐ ಹಾಗೂ ಸಿಪಿಐಎಂ ಪಕ್ಷಗಳು, ಯಾವುದೇ ಪಕ್ಷದ ಜಾತ್ಯತೀತ ಮನೋಭಾವದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ತೀರ್ಮಾನಿಸಿದೆ. ಎಡಪಕ್ಷಗಳು ಸ್ಪರ್ಧೆ ಮಾಡಿದರೆ ಆ ಕ್ಷೇತ್ರದ ಜಾತ್ಯತೀತ ಮತಗಳ ವಿಭಜನೆ ಆಗುತ್ತದೆ ಅನ್ನೋದು ಈ ತಂತ್ರಗಾರಿಕೆ ಹಿಂದಿರುವ ಉದ್ದೇಶ. ಈ ಮೂಲಕ ಬಿಜೆಪಿಗೆ ಲಾಭವಾಗದಂತೆ ತಡೆಯುವ ತಂತ್ರಗಾರಿಕೆ ಇದು.
ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಆದ್ರೆ, ಎಡಪಕ್ಷಗಳು ಮಾತ್ರ ಚುನಾವಣಾ ಅಖಾಡದಲ್ಲಿ ಸದ್ದು ಮಾಡುತ್ತಿಲ್ಲ. ಅದರಲ್ಲೂ ಕರಾವಳಿ ಕರ್ನಾಟಕ ಭಾಗದಲ್ಲಿ ಎಡಪಕ್ಷಗಳು ಸೈಲೆಂಟ್ ಆಗಿವೆ! ಇದಕ್ಕೆ ಕಾರಣವೂ ಇದೆ!
ಚುನಾವಣಾ ಅಖಾಡಕ್ಕೆ ಇಳಿಯದೇ ಇರಲು ಸಿಪಿಐ ಹಾಗೂ ಸಿಪಿಐಎಂ ಪಕ್ಷಗಳು ತೀರ್ಮಾನ ಮಾಡಿವೆ. ಆದ್ರೆ, ಚುನಾವಣಾ ಕಣದಲ್ಲಿ ಸಕ್ರಿಯವಾಗಿ ಇರಲು ಎಡಪಕ್ಷಗಳು ತೀರ್ಮಾನ ಮಾಡಿವೆ. ಬಿಜೆಪಿಗೆ ಹಿನ್ನಡೆ ಉಂಟು ಮಾಡೋದೇ ತಮ್ಮ ಗುರಿ ಎನ್ನುತ್ತಿವೆ ಎಡಪಕ್ಷಗಳು! ಹೌದು. ಎಡಪಕ್ಷಗಳು ಚುನಾವಣಾ ಕಣಕ್ಕೆ ಇಳಿದರೆ ಜಾತ್ಯತೀತ ಮತಗಳು ವಿಭಜನೆ ಆಗುತ್ತವೆ. ಈ ಮೂಲಕ ಬಿಜೆಪಿಗೆ ಲಾಭವಾಗುತ್ತದೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮತೀಯ ಆಧಾರದ ಮೇಲೆ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳೋದು ಎಡಪಕ್ಷಗಳ ತಂತ್ರಗಾರಿಕೆ.
ಏಪ್ರಿಲ್ 18 ರಂದು ಸಿಪಿಐಎಂ ಹಾಗೂ ಸಿಪಿಐ ಮಂಗಳೂರಿನ ಡಾನ್ ಬಾಸ್ಕೋ ಹಾಲ್ನಲ್ಲಿ ಸಭೆ ಏರ್ಪಡಿಸಿತ್ತು. ಈ ಸಭೆಯಲ್ಲಿ ತಮ್ಮ ಪಕ್ಷ ಚುನಾವಣಾ ಅಖಾಡಕ್ಕೆ ಇಳಿಯದೆ ಇರಲು ತೀರ್ಮಾನ ಮಾಡಿರೋದಾಗಿ ಘೋಷಿಸಿದೆ. ಆದ್ರೆ, ಚುನಾವಣಾ ಪ್ರಚಾರ ಕಣದಲ್ಲಿ ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ಎಡಪಕ್ಷಗಳು ಸಕ್ರಿಯವಾಗಿ ಇರಲಿವೆ. ಬಿಜೆಪಿಯನ್ನು ಸೋಲಿಸುವ ಗುರಿಯೊಂದಿಗೆ ಪಕ್ಷ ಮುನ್ನಡೆಯಲಿದೆ.
ರಾಜ್ಯದ ಕನಿಷ್ಟ 5 ಕ್ಷೇತ್ರಗಳಲ್ಲಾದರೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿಪಿಐಎಂ ನಿರ್ಧರಿಸಿದೆ. ಆದ್ರೆ, ಪ್ರಮುಖವಾಗಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರಲು ಎಡಪಕ್ಷಗಳು ತೀರ್ಮಾನಿಸಿವೆ. ಎಡಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಧುಮುಕಿದರೆ ಜಾತ್ಯತೀತ ಮತಗಳ ವಿಭಜನೆ ಆಗುತ್ತದೆ. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಸುಲಭ ಆಗಿಬಿಡುತ್ತೆ ಅನ್ನೋದು ಎಡಪಕ್ಷಗಳ ನಿಲುವು. ಜೊತೆಯಲ್ಲೇ ತಮ್ಮ ಪಕ್ಷದ ಅಭ್ಯರ್ಥಿಗಳು ಇಲ್ಲ ಅನ್ನೋ ಕಾರಣಕ್ಕೆ ಎಡಪಕ್ಷಗಳು ಸುಮ್ಮನಿರೋದಿಲ್ಲ. ಅನ್ಯ ಪಕ್ಷಗಳ ಜಾತ್ಯತೀತ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸೋದಾಗಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ಧಾರೆ.
1962ರಿಂದಲೇ ಕರಾವಳಿಯಲ್ಲಿ ಎಡಪಕ್ಷಗಳ ಭದ್ರ ನೆಲೆ ಇದೆ. ಸಿಪಿಐ ನಾಯಕ ಎ. ಕೃಷ್ಣ ಶೆಟ್ಟಿ ಅವರು ಮಂಗಳೂರಿನಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದರು. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಪಿ. ರಾಮಚಂದ್ರ ರಾವ್ ಅವರು ಗೆಲುವು ಸಾಧಿಸಿದ್ದರು. ಇದಲ್ಲದೆ ಎಡಪಕ್ಷಗಳ ಯುವ ಘಟಕಗಳು ಕರಾವಳಿಯ ವಿವಿಧ ಸಾಮಾಜಿಕ ವಿಚಾರಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕರಾವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಗೆಲುವು ಸಾಧಿಸಿ ಉದಾಹರಣೆಗಳಿವೆ.