ಮಂಗಳೂರು: ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ಶ್ರೀಕೃಷ್ಣನ್ ಹರಿಹರ ಶರ್ಮ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅಧಿಕಾರಾವಧಿಗೆ ನೇಮಕ ಮಾಡಿದೆ.
ಶ್ರೀಕೃಷ್ಣನ್ ಅವರು ಬ್ಯಾಂಕಿಂಗ್ ನ ವಿವಿಧ ಕ್ಷೇತ್ರಗಳಲ್ಲಿ ಹಾಗೂ ತಂತ್ರಜ್ಞಾನ ಮತ್ತು ಪಾವತಿ ಕ್ಷೇತ್ರಗಳಲ್ಲಿ ಸುಮಾರು ನಲುವತ್ತು ವರ್ಷಗಳ ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಮುಂಚೆ ಅವರು ಹೆಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ಯೆಸ್ ಬ್ಯಾಂಕ್ ಲಿಮಿಟೆಡ್ ಹಾಗೂ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು.
ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ಸಂಸ್ಥಾಪಕ ತಂಡದ ಭಾಗವಾಗಿದ್ದರು ಹಾಗೂ ಬ್ಯಾಂಕಿನ ಕಾರ್ಪೊರೇಟ್ ಮತ್ತು ರಿಟೇಲ್ ಬ್ಯಾಂಕಿಂಗ್, ಖಜಾನೆ ಮತ್ತು ಬಂಡವಾಳ ಮಾರುಕಟ್ಟೆಗಳ ಮೂಲಸೌಕರ್ಯ ವ್ಯವಹಾರವನ್ನು ನಿರ್ವಹಿಸುವುದರಲ್ಲಿ ತಮ್ಮ ಸೇವೆಯನ್ನು ನೀಡಿದ್ದಾರೆ.
ಯೆಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಅವರು ವಾಣಿಜ್ಯ ಬ್ಯಾಂಕಿಂಗ್ ಮೂಲಸೌಕರ್ಯವನ್ನು ನಿರ್ವಹಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ ಜಿಯೋ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಇಂಟರೀಮ್ (ಮಧ್ಯಂತರ) ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಶೇಖರ್ ರಾವ್ ಅವರು “ಕರ್ಣಾಟಕ ಬ್ಯಾಂಕಿಗೆ ಶ್ರೀಕೃಷ್ಣನ್ ಹರಿಹರ ಶರ್ಮ ಅವರನ್ನು ಸ್ವಾಗತಿಸಲು ಸಂತೋಷ ಪಡುತ್ತೇನೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶ್ರೀಯುತರ ಅಪಾರ ಅನುಭವ ಮತ್ತು ಕೌಶಲ್ಯಗಳು ನಮ್ಮ ಬ್ಯಾಂಕಿನ ಪ್ರಗತಿಯ ಹಾದಿಯಲ್ಲಿ ಯಶಸ್ಸು ಸಾಧಿಸಲು ಕೊಡುಗೆಯಾಗಲಿದೆ.
ನಮ್ಮ ಗ್ರಾಹಕರು ಹಾಗೂ ಶೇರುದಾರರಿಗೆ ಅವರ ಮೂಲಕ ಮೌಲ್ಯಯುತವಾದ ಸೇವೆ ಇನ್ನಷ್ಟು ಸಿಗಲಿದೆ” ಎಂದು ನುಡಿದರು. ಈ ಸಂರ್ಭ ಮಾತನಾಡಿದ ಶ್ರೀಕೃಷ್ಣನ್ “ಕರ್ಣಾಟಕ ಬ್ಯಾಂಕ್ ಕುಟುಂಬಕ್ಕೆ ಸೇರಲು ಬಹಳ ಹೆಮ್ಮೆಯಾಗುತ್ತಿದೆ. ನೂರು ವರ್ಷಗಳ ಕಾಲ ನಂಬಿಕೆ ಮತ್ತು ಒಳ್ಳೆಯ ಹೆಸರನ್ನು ತಳಪಾಯವಾಗಿ ಬೆಳೆಸಿಕೊಂಡು ಬಂದ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಲು ಉತ್ಸುಹಕನಾಗಿದ್ದೇನೆ” ಎಂದು ನುಡಿದರು.