ಮಂಗಳೂರು: ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ತನ್ನ ಎಂಎಸ್ಎಂಇ ಗ್ರಾಹಕರ ಅನುಕೂಲಕ್ಕಾಗಿ ನಿರ್ಮಾಣ ಯಂತ್ರ/ಸಲಕರಣೆ ಹಾಗೂ ಭೂಮಿ ಅಗೆತಕ್ಕೆ ಸಂಬಂಧಿಸಿದ ಬೃಹತ್ ಯಂತ್ರ ತಯಾರಕ ಸಲಕರಣೆಯನ್ನು ಉತ್ಪಾದಿಸುತ್ತಿರುವ ಹ್ಯುಂಡೈ ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಡಂಬಡಿಕೆಯೊಂದನ್ನು ಮಾಡಿಕೊಂಡಿದೆ.
ಈ ಒಡಂಬಡಿಕೆಯಿಂದಗಿ ಕರ್ಣಾಟಕ ಬ್ಯಾಂಕ್, ಹ್ಯುಂಡೈ ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆದ್ಯತೆಯ ಹಣಕಾಸುದಾರ ಬ್ಯಾಂಕ್ ಆಗಿ ಸ್ಪರ್ಧಾತ್ಮಕ ಬಡ್ಡಿದರದ ಮೂಲಕ ಈ ಸಂಸ್ಥೆಯ ವಿವಿಧಶ್ರೇಣಿಯ ನಿರ್ಮಾಣ ಯಂತ್ರ/ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಿದೆ. ಒಡಂಬಡಿಕೆಯನ್ನು ಅಂಗೀಕರಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಅವರುಶ್ರೇಷ್ಠತೆ, ಸಮಗ್ರತೆ, ದೀರ್ಘಾವಧಿ ಅಭಿವೃದ್ಧಿಯ ದೃಷ್ಟಿಕೋನ ಹಾಗೂ ಬದ್ಧತೆಗೆ ಹೆಸರುವಾಸಿಯಾಗಿರುವ ಕರ್ಣಾಟಕ ಬ್ಯಾಂಕ್, ಅದೇ ರೀತಿಯ ತತ್ವಗಳನ್ನು ಅಳವಡಿಸಿಕೊಂಡಿರುವ ಹ್ಯುಂಡೈ ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿರುವುದು ಸಂತಸ ತಂದಿದೆ.
ನಮ್ಮ ಬ್ಯಾಂಕ್ ಎಂಎಸ್ಎಂಇ ಗ್ರಾಹಕರಿಗೆ ನೆರವು ನೀಡುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ಎಂಎಸ್ಎಂಇ ಗ್ರಾಹಕರಿಗೆ ನಿರ್ಮಾಣ ಯಂತ್ರ/ಸಲಕರಣೆ ಹಾಗೂ ಭೂಮಿ ಅಗೆತಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಖರೀದಿಸುವಲ್ಲಿ ಈ ಒಡಂಬಡಿಕೆಯು ಮತ್ತಷ್ಟು ಸಹಕಾರಿಯಾಗಲಿದೆ. ಕರ್ಣಾಟಕ ಬ್ಯಾಂಕ್ ವಿವಿಧ ಹಣಕಾಸು ಯೋಜನೆಗಳನ್ನು ಒದಗಿಸಿ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಆಕರ್ಷಕ ಬಡ್ಡಿದರ ಮತ್ತು ತ್ವರಿತ ಸಾಲ ಮಂಜೂರಾತಿಯ ವ್ಯವಸ್ಥೆಯನ್ನು ಮಾಡಿದ್ದು ಗ್ರಾಹಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಚೀಫ್ ಬಿಸಿನೆಸ್ ಆಫೀಸರ್ ಶ್ರೀ ಗೋಕುಲ್ದಾಸ್ ಪೈ, ಜನರಲ್ ಮ್ಯಾನೇಜರ್ಗಳು, ಹ್ಯುಂಡೈ ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾಗಿರುವ ರಾಜೀವ ಚತುರ್ವೇದಿ ಹಾಗೂ ಬ್ಯಾಂಕಿನ ಮತ್ತು ಹ್ಯುಂಡೈ ಕನ್ಸ್ಟ್ರಕ್ಷನ್ ಎಕ್ವಿಪ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.