ಬಂಟ್ವಾಳ: ಕಲ್ಲಡ್ಕ ಶಿಲ್ಪಾ ವಾಚ್ ವರ್ಕ್ಸ್ ನ ಮಾಲಕ, ಸ್ನೇಹಜೀವಿ ಸುರೇಶ್ ಕಲ್ಲಡ್ಕ(63) ರವರು ಮಂಗಳವಾರ ಬೆಳಿಗ್ಗೆ ತಮ್ಮ ಬೊಂಡಾಲದ ಸ್ವಗೃಹದಲ್ಲಿ ನಿಧನಹೊಂದಿದರು.
ಕಳೆದ ಹಲವು ವರ್ಷಗಳಿಂದ ಕಲ್ಲಡ್ಕದಲ್ಲಿ ಶಿಲ್ಪಾ ವಾಚ್ ವರ್ಕ್ಸ್ ಅನ್ನು ಮುನ್ನಡೆಸಿಕೊಂಡು ಬರುತ್ತಿದ್ದ ಇವರು, ಸ್ನೇಹಜೀವಿಯಾಗಿ, ಹಾಸ್ಯ ಪ್ರಜ್ಞೆಯ ಮೂಲಕ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಉತ್ತಮ ಶಟ್ಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ಜಿಲ್ಲೆ ಹಾಗೂ ರಾಜ್ಯಮಟ್ಟದ ಹಲವು ಪಂದ್ಯಾಟಗಳಲ್ಲಿ ಬಹುಮಾನ ಪಡೆದಿದ್ದರು. “ಹೌದು ಇದು” ಶೀರ್ಷಿಕೆಯ ಮೂಲಕ ಹೆಸರು ಪಡೆದಿದ್ದ ಇವರು, ಸಮಾಜ ಸೇವೆಯ ಜೊತೆಗೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುರೇಶ್ ಕಲ್ಲಡ್ಕ ರವರ ನಿಧನಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಸಹಿತ ಅಪಾರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.