ಮಡಿಕೇರಿ, ಜು.12: ಕೊಡಗಿನ ಜನ ವಿವಿಧ ಆಪತ್ತುಗಳಿಗೆ ಸಿಲುಕಿದಾಗ ನೆರವಿಗೆ ಧಾವಿಸುವ ಕೊಡಗು ರಕ್ಷಣಾ ವೇದಿಕೆ ಇದೀಗ ಮಹಾಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದೆ.
ಮಳೆಹಾನಿಯಿಂದ ನಷ್ಟ ಅನುಭವಿಸಿ ಅತಂತ್ರ ಸ್ಥಿತಿ ಅನುಭವಿಸುತ್ತಿರುವ ಕುಟುಂಬಗಳಿಗೆ ಪರಿಹಾರ ಒದಗಿಸಲು ಮತ್ತು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು “ವಿಪತ್ತು ಪರಿಹಾರ ವಾಹನ”ವನ್ನು ಆರಂಭಿಸಿದೆ. ಈ ವಾಹನದ ಕಾರ್ಯ ಚಟುವಟಿಕೆಗೆ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿದರು.
ನಗರದ ಸುದರ್ಶನ ಅತಿಥಿ ಗೃಹದ ಎದುರು ಕೊಡಗು ರಕ್ಷಣಾ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು ಸಂದಿಗ್ಧ ಕಾಲದಲ್ಲಿ ಸಂಘ, ಸಂಸ್ಥೆಗಳು ನೊಂದವರ ನೆರವಿಗೆ ಬರುತ್ತಿರುವುದು ಶ್ಲಾಘನೀಯವೆಂದರು.
ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ 2018 ಮತ್ತು 19 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಕೊಡಗಿನ ಜನರ ನೆರವಿಗೆ ವೇದಿಕೆ ಬಂದಿದೆ. 2020ರಲ್ಲಿ ಕೋವಿಡ್ ನಿಂದ ನೊಂದ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ್ದೇವೆ. 2021ರಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆ ಮುಂಭಾಗ ನಿರಂತರ ಒಂದು ತಿಂಗಳ ಕಾಲ ಹಗಲಿರುಳೆನ್ನದೆ 13000 ಕ್ಕೂ ಹೆಚ್ಚು ಜನರ ಹಸಿವನ್ನು ತಣಿಸಿದ್ದೇವೆ ಎಂದರು.
ಈ ಬಾರಿಯೂ ಮಹಾಮಳೆಯಿಂದ ಯಾವುದೇ ಪರಿಸ್ಥಿತಿ ಎದುರಾದರೂ ಕೊರವೇ ಸಂತ್ರಸ್ತರ ಸಹಾಯಕ್ಕೆ ಬರಲಿದೆ. ನೆರವಿಗಾಗಿ 90490 50905 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಕೊರವೇ ಭಾಗಮಂಡಲ ಹೋಬಳಿ ಅಧ್ಯಕ್ಷ ಚದುಕಾರ್ ವಿನೋದ್, ಕೆ.ವಿಷು, ನಿರ್ದೇಶಕ ರವಿ ಪಾಪು, ಮಡಿಕೇರಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಭರತ್ ನಾಣಯ್ಯ, ಪೊನ್ನಂಪೇಟೆ ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷ ಚೇರಂಡ ರೋಷನ್, ಪುನೀತ್, ಜಮೀರ್, ರೆಹಮಾನ್, ಜಯಣ್ಣ ಮತ್ತಿತರ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.