ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶ ಮಾಡಿದ ವಿಚಾರದ ಬಗ್ಗೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಕುರಿತ ಹೇಳಿಕೆಯ ವಿವಾದವನ್ನು ಮರೆಮಾಚಲು ಈಗ ಮಾಂಸ ಸೇವಿಸಿ ದೇವಸ್ಥಾನ ಭೇಟಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಸಮಾಜವಾದಿ ಚಿಂತನೆಯ, ನಾಸ್ತಿಕವಾದಿ ಕಾಂಗ್ರೆಸ್ಸಿಗ ಸಿದ್ದರಾಮಯ್ಯನವರು. ಅವರು ದೇವರು, ದಿಂಡರನ್ನು ನಂಬದೆ ಇರುವ ವ್ಯಕ್ತಿ ಸಾವರ್ಕರ್ ಅವರ ಹೋರಾಟ ಮತ್ತು ರಾಷ್ಟ್ರಾಭಿಮಾನವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರು ದೇವರನ್ನೂ ನಂಬುವುದಿಲ್ಲ, ರಾಷ್ಟ್ರವನ್ನೂ ನಂಬುವುದಿಲ್ಲ. ಅಂತಹ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರತಿಕ್ರಿಯಿಸಿದರು.
ಸಾವರ್ಕರ್ರ ಹೋರಾಟ ಹಾಗೂ ರಾಷ್ಟ್ರಾಭಿಮಾನವನ್ನು ಪ್ರಶ್ನಿಸುವ ಭಂಡ ನಾಯಕ ಸಿದ್ದರಾಮಯ್ಯ ಆಗಿದ್ದಾರೆ. ಈಗಲಾದರೂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನವರು ಸಾವರ್ಕರ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ನಲ್ಲಿ ನಾಯಕತ್ವಕ್ಕಾಗಿ ಕಚ್ಚಾಟ ಜಾಸ್ತಿಯಾಗುತ್ತಿದೆ. ನಾನಾ ರೀತಿಯ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ತನ್ನ ಮಾನಸಿಕತೆ ತೋರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.