ಪುತ್ತೂರು: ರಾಜ್ಯದ ಸಿದ್ಧರಾಮಯ್ಯ ಸರಕಾರ ಭ್ರಷ್ಟರ ಕೂಟದ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣದ ಮೇಲೂ ದಬ್ಬಾಳಿಕೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ,ಪಂಗಡದವರ ಜಾಗ ಕಬಳಿಸಿದ ಸಚಿವ ಸುಧಾಕರ್ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಗಳಿಗೆ ಮಾನವಿದ್ದರೆ ಸಚಿವ ಸುಧಾಕರ್ ಅವರ ರಾಜೀನಾಮೆ ಪಡೆಯಬೇಕು. ನಮ್ಮ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಸಚಿವರ ವಿರುದ್ಧ ದೂರು ಬಂದಾಗ ರಾಜೀನಾಮೆ ಕೊಡಿಸಿದ್ದೆವು. ಆದರೆ ಈಗಿನ ಸರಕಾರದ ಎಲ್ಲಾ ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ.
ಚೆಲುವರಾಯಸ್ಚಾಮಿ ವಿರುದ್ಧ ಅಧಿಕಾರಿಗಳೇ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಕೇವಲ ಮೂರು ತಿಂಗಳಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಬರಗಾಲ ಘೋಷಣೆ ಮಾಡಲೂ ಮೀನಮೇಷ ಎಣಿಸುತ್ತಿದೆ. ಕೇವಲ 164 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ.
ಇಡೀ ರಾಜ್ಯದಲ್ಲಿ ಬರದ ಸ್ಥಿತಿ ಇದೆ. ಆದ ಕಾರಣ ಇಡೀ ರಾಜ್ಯದಲ್ಲಿ ಬರ ಘೋಷಣೆ ಮಾಡಬೇಕು. ಮಲೆನಾಡು,ಕರಾವಳಿ ಭಾರೀ ಮಳೆಯಾಗುವ ಪ್ರದೇಶಗಳು. ಆದರೆ ಈ ಬಾರಿ ಈ ಭಾಗದಲ್ಲೂ ಮಳೆಯಿಲ್ಲ. ನದಿಗಳೆಲ್ಲಾ ಬತ್ತಿ ಹೋಗುತ್ತಿದೆ. ಇಡೀ ರಾಜ್ಯಕ್ಕೆ ಬರ ಘೋಷಣೆ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದರು.