ಮಂಗಳೂರು: ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭಗೊಂಡಿದೆ. ಯಾವತ್ತೂ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದ ಕಾಂಗ್ರೆಸ್ ಈ ಬಾರಿ ಈ ಪರಂಪರೆಯನ್ನು ಮುರಿದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಕ್ಷೇತ್ರಗಳ ಹಾಗೂ ಉಡುಪಿ ಜಿಲ್ಲೆಯಲ್ಲಿ 3 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಹಳಷ್ಟು ಮುಂಚಿತವಾಗಿ ಬಿಡುಗಡೆ ಮಾಡಿ ಆಚ್ಚರಿ ಮೂಡಿಸಿದೆ. ಆದರೆ ಅಭ್ಯರ್ಥಿಗಳ ಪಟ್ಟಿಯನ್ನು ಸಾಕಷ್ಟು ಮಂಚಿತವಾಗಿ ಪ್ರಕಟಿಸುತ್ತಿದ್ದ ಬಿಜೆಪಿ ಈ ಬಾರಿ ವಿಳಂಬ ಧೋರಣೆಗೆ ಶರಣಾಗಿದೆ.
ಏ.13ರಿಂದ ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು ಅಂದೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ.ಎ.21 ನಾಮಪತ್ರ ಸಲ್ಲಿಕೆಗೆ ಹಾಗೂ.ಎ.24 ಹಿಂದೆಗೆತಕ್ಕೆ ಕೊನೆಯ ದಿನವಾಗಿದೆ. ಬಿಜೆಪಿಯಲ್ಲಿ ದ.ಕ.ಜಿಲ್ಲೆಯಲ್ಲಿ ಎಲ್ಲಾ ಹಾಲಿ ಶಾಸಕರಿಗೆ ಈ ಬಾರಿ ಟಿಕೇಟು ಖಚಿತ ಎಂಬ ಭಾವನೆ ಇತ್ತು. ಆದರೆ ಈ ನಡುವೆ ಪಕ್ಷ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಿ ತಲಾ ಮೂರು ಹೆಸರುಗಳನ್ನು ಸಂಗ್ರಹಿಸುವ ಮೂಲಕ ಸಸ್ಪೆನ್ಸ್ ಸೃಷ್ಟಿಸಿದೆ.
ಎರಡು ಕ್ಷೇತ್ರಗಳಲ್ಲಿ ಈ ಬಾರಿ ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಸಿಗಲಿದೆ ಎಂದು ಒಂದು ಮೂಲ ಹೇಳುತ್ತಿದ್ದರೆ ಇನ್ನೊಂದು ಮೂಲದ ಪ್ರಕಾರ ಈ ಬಾರಿ ಎಲ್ಲಾ ಯಾವುದೇ ಬದಲಾವಣೆ ಇಲ್ಲ. ಎಲ್ಲಾ 7 ಹಾಲಿ ಶಾಸಕರಿಗೆ ಟಿಕೇಟು ದೊರೆಯಲಿದೆ. ಏನಿದ್ದರೂ ಒಂದು ವಾರದೊಳಗೆ ಅಭ್ಯರ್ಥಿಗಳ ಘೋಷಣೆಯಾಗಿ ಈ ಎಲ್ಲಾ ಸಸ್ಪೆನ್ಸ್ಗಳಿಗೆ ತೆರೆಬೀಳುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷ ಬಂಟ್ವಾಳ, ಮಂಗಳೂರು, ಬೆಳ್ತಂಗಡಿ, ಸುಳ್ಯ ಹಾಗೂ ಮೂಡುಬಿದಿರೆಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಆದರೆ ಪುತ್ತೂರು, ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರಕ್ಕೆ ಸಂಬಂಧಿಸಿದಂತೆ ಆಭ್ಯರ್ಥಿಗಳ ಆಯ್ಕೆಯಲ್ಲಿ ಸವಾಲು ಎದುರಾಗಿದೆ. ಪುತ್ತೂರಿನಲ್ಲಿ ಸುಮಾರು 15 ಆಕಾಂಕ್ಷಿಗಳ ಪೈಕಿ ಅಂತಿಮವಾಗಿ ಆಶೋಕ್ ಕುಮಾರ್ ರೈ, ಶಕುಂತಳಾ ಶೆಟ್ಟಿ ಹಾಗೂ ಹೇಮನಾಥ ಶೆಟ್ಟಿ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಕಿ ಹೇಮನಾಥ ಶೆಟ್ಟಿಯವರನ್ನು ಪಕ್ಷದ ವರಿಷ್ಠ ಮಂಡಳಿ ಹೊಸದಿಲ್ಲಿ ಕರೆಯಿಸಿಕೊಂಡಿದ್ದು ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಮಂಗಳೂರು ದಕ್ಷಿಣದಲ್ಲಿ 8 ಆಕಾಂಕ್ಷಿಗಳಲ್ಲಿ ಅಂತಿಮವಾಗಿ ಮಾಜಿ ಶಾಸಕ ಜೆ.ಆರ್. ಲೋಬೋ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಈ ಹಂತದಲ್ಲಿ ಪದ್ಮರಾಜ್ ಅವರು ಹೆಸರು ಪ್ರವೇಶ ಮಾಡಿದ್ದು ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಹೊಸ ತಿರುವು ನೀಡಿದೆ. ಪದ್ಮರಾಜ್ ಅವರನ್ನುಪಕ್ಷದ ವರಿಷ್ಠ ಮಂಡಳಿ ಹೊಸದಿಲ್ಲಿಗೆ ಕರೆಯಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಮಂಗಳೂರು ಉತ್ತರದಲ್ಲಿ 10 ಆಕಾಂಕ್ಷಿಗಳಲ್ಲಿ ಅಂತಿಮವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಹಾಗೂ ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ನಡುವೆ ತೀವ್ರ ಸ್ಪರ್ಧೆ ಇದೆ.
ಅಂತಿಮವಾಗಿ ಹೊಸದಿಲ್ಲಿ ಯಲ್ಲಿ ಪಕ್ಷದ ವರಿಷ್ಠರ ಕೃಪಾಕಟಾಕ್ಷ ಯಾರ ಪಾಲಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರಿದ್ದಾರೆ. ಸುಳ್ಯದಲ್ಲಿ ಘೋಷಿತ ಅಭ್ಯರ್ಥಿ ವಿರುದ್ದ ಎದ್ದಿರುವ ಅಸಮಾಧಾನದ ಅಲೆ ಹೊಸದಿಲ್ಲಿಯ ಪಕ್ಷದ ಹೈಕಮಾಂಡ್ ಅಂಗಳ ತಲುಪಿದ್ದು ವರಿಷ್ಠನ್ನು ಗೊಂದಲದಲ್ಲಿ ಕೆಡವಿದೆ.