ಮಂಗಳೂರು: ಉತ್ತರ ಭಾರತದ ಯೋಗಿ ಆದಿತ್ಯನಾಥರ ಸಂಬಂಧವಿರುವ ಕದ್ರಿ ಜೋಗಿಮಠದ ಬ್ರಹ್ಮಕಲಶೋತ್ಸವದ ಬಳಿಕ ಮಠಾಧೀಶರು ಹಾಗೂ ಭಕ್ತರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಬ್ರಹ್ಮಕಲಶೋತ್ಸವದ ವೇಳೆ ಶಿಷ್ಯರಿಗೆ ತಿಳಿಯದಂತೆ ಮಠಾಧೀಶರು ಜೋಗಿಮಠದ ಕಾಲಭೈರವ ದೇವರ ಮೂಲ ಮೂರ್ತಿಯನ್ನು ಹೊರಗಿಟ್ಟು ನೂತನ ಮೂರ್ತಿಯನ್ನು ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಿದ್ದಾರೆ. ಇದು ಜೋಗಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಮಂಗಳೂರು ನಗರದಲ್ಲಿಯೇ ಏಕೈಕ ಕಾಲಭೈರವ ದೇವರ ದೇವಾಲಯ ಕದ್ರಿಯಲ್ಲಿದೆ. ಇಲ್ಲಿನ ಕಾಲಭೈರವ ದೇವರ ಮೂರ್ತಿ ಬಹಳ ಕಾರಣಿಕವುಳ್ಳದ್ದು ಎಂಬುದು ಭಕ್ತರ ನಂಬಿಕೆ. ಆದರೆ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವದ ವೇಳೆ ಮಠಾಧೀಶ ರಾಜಯೋಗಿ ಶ್ರೀ ನಿರ್ಮಲನಾಥ ಮಹಾರಾಜರು ತಮ್ಮ ರಾಜಸ್ತಾನಿ ಭಕ್ತರೊಂದಿಗೆ ಸೇರಿಕೊಂಡು, ಜೋಗಿ ಸಮುದಾಯವನ್ನು ಕಡೆಗಣಿಸಿ ಸ್ವಇಚ್ಛೆಯಿಂದ ಹಳೆಯ ಮೂರ್ತಿಯನ್ನು ಬದಲಾಯಿಸಿದೆ. ಆ ಜಾಗಕ್ಕೆ ರಾಜಸ್ತಾನಿ ಭಕ್ತರು ನೀಡಿರುವ ನೂತನ ಗ್ರಾನೈಟ್ ಕಾಲಭೈರವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಹಳೆಯ ಶಿಲಾಮಯ ಕಾಲಭೈರವನ ವಿಗ್ರಹವನ್ನು 70ಲಕ್ಷಕ್ಕೆ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಇದು ಶಿಷ್ಯರಿಗೆ ತಿಳಿದು ಡಿಸಿ, ಪುರಾತತ್ವ ಇಲಾಖೆಗಳಿಗೆ ದೂರು ನೀಡಿ ಮೂಲ ಮೂರ್ತಿಯನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ.
ಆದ್ದರಿಂದ ಕದ್ರಿ ಜೋಗಿಮಠದ ಹಿತರಕ್ಷಣಾ ಸಮಿತಿಯು ಪುರಾತತ್ವ ಇಲಾಖೆ ಮೂಲಕ ಕಾಲಭೈರವನ ಮೂಲ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದೆ. ಅಲ್ಲದೆ ತನಿಖೆಗೆ ಆಗ್ರಹವನ್ನೂ ಮಾಡಲಾಗಿದೆ. ಆದರೆ ಮಠಾಧೀಶರು ನಮ್ಮ ಮನವಿಗೆ ಸೊಪ್ಪು ಹಾಕದೆ, ಡಿಸಿಯವರ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಇದೀಗ ಮಠದ ಶಿಷ್ಯ ಪರಂಪರೆ ಮಠಾಧೀಶರ ವಿರುದ್ಧವೇ ಸಿಡಿದೆದ್ದಿದ್ದು, ಆಗಸ್ಟ್ 27ರಂದು ಸಮಸ್ತ ಜೋಗಿಸಮುದಾಯು ಮಠದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ.