ಮಂಗಳೂರು: ಮಂಗಳೂರಿನ ಪಾಲ್ದಾನೆಯ ಕೋಲ್ಕತದ ಸಂತ ತೆರೆಸಾ ಧರ್ಮಕೇಂದ್ರದ ಸ್ಥಾಪಕ ಹಾಗೂ ಪ್ರಥಮ ಮುಖ್ಯ ಧರ್ಮಗುರುಗಳಾಗಿ 10 ವರ್ಷ ಅಮೂಲ್ಯ ಸೇವೆ ಸಲ್ಲಿಸಿದ ವಂದನೀಯ ಫಾ. ಗ್ರೆಗರಿ ವಿಲ್ಲಿಯಮ್ ವಾಸ್ (ಫಾ. ಜಿ ಡಬ್ಲ್ಯೂ ವಾಸ್) ಇವರು ಅಕ್ಟೋಬರ್ 26,2022ರಂದು ತಮ್ಮ 81ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಇದೇ ನವೆಂಬರ್ 11 ರಂದು ಬೆಳಿಗ್ಗೆ 8.00 ಗಂಟೆಗೆ ಪಾಲ್ದಾನೆ ಕೋಲ್ಕತದ ಸಂತ ತೆರೆಸಾ ದೇವಾಲಯದಲ್ಲಿ ಬಲಪೂಜೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ದೇವರ ವಾಕ್ಯದ ಮೇಲೆ ಪ್ರವಚನ ನೀಡಿದ ವಂ.ಫಾ. ಸಿಲ್ವೆಸ್ಟರ್ ಮಿರಾಂದ (ವಾಸ್ತವ್ಯ ಧರ್ಮಗುರುಗಳು) ಇವರು, ಫಾ. ವಾಸ್ ಯೇಸುಕ್ರಿಸ್ತರ ಹಾದಿಯಲ್ಲಿ ನಡೆದು, ಕ್ರಿಸ್ತರ ಬೆಳಕನ್ನು 30ವರ್ಷಗಳ ಕಾಲ ತನ್ನ ವಿದ್ಯಾರ್ಥಿಗಳಿಗೆ ನೀಡಿ ಅವರ ಬಾಳದೀವಿಗೆಯಾದರು. ಅವರ ಆದರ್ಶಗಳನ್ನು ನಾವು ಪಾಲಿಸಿದಾಗ ಅದುವೇ ನಿಜವಾದ ಶ್ರದ್ಧಾಂಜಲಿ ಆಗುವುದು ಎಂದರು. ಬಲಿಪೂಜೆಯ ನಂತರ, ಧರ್ಮಕೇಂದ್ರದ ಪರವಾಗಿ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ವಿಲಿಯಂ ಲೋಬೊ ಶ್ರದ್ಧಾಂಜಲಿ ಅರ್ಪಿಸಿ ದಿವಂಗತ ಗುರುಗಳ ನಿಸ್ವಾರ್ಥ ಸೇವೆಯನ್ನು, ಬಡಬಗ್ಗರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಕೊಂಡಾಡಿದರು.
ಎಕಾ ಕಾಳ್ಜಾಚಿ, ಎಕಾ ಮನಾಚಿಂ ಇದು ಅವರ ಉದಾತ್ತ ಧ್ಯೇಯವಾಗಿದ್ದು ಅವರು ಸೇವೆ ನೀಡಿದ ಎಲ್ಲಾ ಕ್ಷೇತ್ರಗಳಲ್ಲಿ ಅವರು ಅದನ್ನು ಅಳವಡಿಸಿಕೊಂಡು ಎಲ್ಲಾ ಜನರು ಒಗ್ಗಟ್ಟಿನಲ್ಲಿ ಬದುಕಲು ಪ್ರೇರಣೆಯಾದರು ಎಂದು ನೆನಪಿಸಿಕೊಂಡರು. ಧರ್ಮಕೇಂದ್ರದ ಪ್ರಧಾನ ಧರ್ಮಗುರು ವಂ. ಫಾ. ಆಲ್ಬನ್ ಡಿ ಸೋಜಾರವರು ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಫೋರ್ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕ ಹಾಗೂ ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್, ಧರ್ಮಕೇಂದ್ರದ ಹಾಗೂ ಆಸುಪಾಸಿನ ಭಕ್ತಾದಿಗಳು ಹಾಜರಿದ್ದರು.