ಬಂಟ್ವಾಳ: ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ದ.ಕ. ಜಿಲ್ಲೆಯ ಪೈಕಿ ಬಂಟ್ವಾಳ ಪುರಸಭೆಗೆ ಮಾತ್ರ ಮಂಜೂರಾಗಿದೆ. ಈ ಯೋಜನೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಪುರಸಭಾ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಅವರು ಅಮೃತ್ ೨.೦ ಯೋಜನೆಯಡಿ ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ೪೦.೧೬ ಕೋಟಿ ರೂಪಾಯಿಗಳ ಕುಡಿಯುವ ನೀರು ವಿತರಣಾ ಯೋಜನೆಗೆ ಬುಧವಾರ ಬಂಟ್ವಾಳ ಪುರಸಭೆ ಕಚೇರಿ ಆವರಣದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಜಕ್ರಿಬೆಟ್ಟುವಿನಲ್ಲಿ ೧೩೫ ಕೋಟಿ ರೂಪಾಯಿಯ ಅಣೆಕಟ್ಟು ನಿರ್ಮಾಣಗೊಂಡಿದ್ದು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ೫೬ ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಯೋಜನೆಯೂ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ಕಸ ವಿಲೇವಾರಿ ಸಮಸ್ಯೆ ನಿವಾರಣೆಯ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದ್ದು ವಿಂಗಡಿಸಿದ ಹಸಿಕಸವನ್ನು ನೀಡಿದ್ದಲ್ಲಿ ತಾನೇ ತೆಗೆದುಕೊಳ್ಳುವುದಾಗಿ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ ಮೊದಲ ಹಂತದ ಯೋಜನೆಯ ಅನುಷ್ಠಾನದ ವೇಳೆ ಸಾಕಷ್ಟು ತೊಂದರೆಯಾಗಿತ್ತು, ಎರಡನೇ ಹಂತದ ಯೋಜನೆ ಜಾರಿಗೊಳಿಸುವ ಸಂದರ್ಭ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಹಾಗೂ ಪುರಸಭಾ ಅಧಿಕಾರಿಗಳು ಜಂಟಿಯಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯನಿರ್ವಹಿಸ ಬೇಕು ಎಂದು ತಿಳಿಸಿದರು. ಪುರಸಭೆಗೆ ಮಂಜೂರಾಗಿರುವ ಈ ಯೋಜನೆಯನ್ನು ಪರಸಭೆಯ ನಾಗರೀಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.
ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯೆ ಸಲೋಚನ ಜಿ.ಕೆ. ಭಟ್, ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್ ಭಂಡಾರಿಬೆಟ್ಟು, ಜಯರಾಮ ನಾಯ್ಕ್, ವಿದ್ಯಾವತಿ ಪ್ರಮೋದ್ ಕುಮಾರ್, ಮೀನಾಕ್ಷಿ ಜೆ. ಗೌಡ, ರೇಖಾ ರಮಾನಾಥ ಪೈ, ದೇವಕಿ ಶಿವಪ್ಪ ಪೂಜಾರಿ, ಶಶಿಕಲಾ ಬಿ., ಜಯಂತಿ, ಚೈತನ್ಯಗಣೇಶ್ದಾಸ್, ರಾಮಕೃಷ್ಣ ಆಳ್ವ, ಅಬೂಬಕ್ಕರ್ ಸಿದ್ದಿಕ್, ಹಸೈನಾರ್, ಝಿನತ್ ಫಿರೋಝ್ ಗಂಗಾಧರ್ ಪೂಜಾರಿ, ಇದ್ರೀಸ್ ನಾಮನಿರ್ದೇಶಿತ ಸದಸ್ಯರಾದ ಚಂದ್ರಶೇಖರ್, ಲಕ್ಷಣ್ರಾಜ್, ಹರೀಶ್ ಕುಲಾಲ್, ಹೂವಯ್ಯ ಮಂಡಾಡಿ, ಕ.ನ.ನೀ.ಸ.ಮಂ ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ಪ್ರಮುಖರಾದ ದೇವಪ್ಪ ಪೂಜಾರಿ, ರಾಮದಾಸ್ ಬಂಟ್ವಾಳ, ರಮಾನಾಥ ರಾಯಿ, ವಿಶ್ವನಾಥ ಚೆಂಡ್ತಿಮಾರ್, ಭಾಸ್ಕರ ಟೈಲರ್, ಮಚ್ಚೇಂದ್ರ ಸಾಲ್ಯಾನ್, ಸುರೇಶ್ ಕುಲಾಲ್, ಕಿಶೋರ್ ಕುಲಾಲ್, ಪ್ರಕಾಶ್ ಅಂಚನ್, ಸುದರ್ಶನ್ ಬಜ, ದಾಮೋದರ ಸಂಚಯಗಿರಿ, ಎಂಜಿನಿಯರ್ ಡೊಮೆನಿಕ್ ಡಿಮೊಲ್ಲೊ ಮೊದಲಾದವರು ಉಪಸ್ಥಿತರಿದ್ದರು. ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸ್ವಾಗತಿಸಿದರು, ಕ.ನ.ನೀ.ಸ.ಮಂ ಮತ್ತು ಒಳಚರಂಡಿ ಮಂಡಳಿ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮೀ ಕಾಮಗಾರಿಯ ಮಾಹಿತಿ ನೀಡಿದರು.