ಪುತ್ತೂರು: ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮೇಲೆ ವಿನಾಕಾರಣ ಲಂಚದ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಮರಣೋತ್ತರ ಪರೀಕ್ಷೆ ಮಾಡದೆ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಎರಡು ಶವದ ಮರಣೋತ್ತರ ಪರೀಕ್ಷೆ ಮಾಡದೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಸಾಕ್ಷ್ಯಗಳಿಲ್ಲದೆ ಏಕಾಏಕಿ ಲಂಚದ ಆರೋಪ ಮಾಡಿದ ಕಲಿಯುಗ ಸೇವಾ ಸಮಿತಿಯ ವಿರುದ್ಧ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿಗಳ ಪ್ರತಿಭಟನೆಯಿಂದ ಮರಣೋತ್ತರ ಪರೀಕ್ಷೆಗೆ ಶವ ತಂದವರ ಕುಟುಂಬಸ್ಥರು ಹೈರಾಣಾಗಿದ್ದು, ಕುಟುಂಬದ ಸದಸ್ಯ ಮರಣಹೊಂದಿದ ದುಃಖದ ನಡುವೆ ಮರಣೋತ್ತರ ಪರೀಕ್ಷೆಗೆ ಬಂದರೂ ಆಸ್ಪತ್ರೆಯವರ ಪ್ರತಿಭಟನೆಯಿಂದಾಗಿ ಮತ್ತೊಮ್ಮೆ ಮನನೊಂದುಕೊಳ್ಳುವಂತಾಗಿದೆ. ಕಲಿಯುಗ ಸೇವಾ ಸಮಿತಿ ನಮ್ಮ ಮೇಲೆ ಮಾಡಿದ ಲಂಚದ ಆರೋಪಕ್ಕೆ ಸಾಕ್ಷ್ಯ ನೀಡಲಿ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾಕ್ಷ್ಯವನ್ನಿಟ್ಟು ಮಾತನಾಡಲಿ, ಇಲ್ಲವಾದಲ್ಲಿ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ ಎಂದು ಪಟ್ಟುಹಿಡಿದರು. ಕೊನೇ ಕ್ಷಣದಲ್ಲಿ ವೈದ್ಯರು ಹೊರಗುತ್ತಿಗೆ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು. ನಿಮ್ಮ ಜೊತೆ ನಾವಿದ್ದೇವೆ ನಮಗೂ ಕಲಿಯುಗ ಸಮಿತಿಯವರು ಲಂಚದ ಆರೋಪ ಮಾಡಿದ್ದಾರೆ. ನಾವು ಪ್ರತಿಭಟಿಸದೆ ಈಗ ಇರುವ ಎರಡು ಶವದ ಮರಣೋತ್ತರ ಪರೀಕ್ಷೆ ಮಾಡಬೇಕಿದೆ ಎಂದು ವೈದ್ಯರು ಆಗ್ರಹಿಸಿದರು. ವೈದ್ಯರ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನೆ ನೌಕರರು ಪ್ರತಿಭಟನೆ ಹಿಂಪಡೆದರು.