ಬೇಲೂರು: ಬೇಲೂರು ತಾಲ್ಲೂಕು ಕಸಬಾ ಹೋಬಳಿ ಚಿಕ್ಕ ಮೇದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಜಿ ಸಚಿವ ಬಿ.ಶಿವರಾಂ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು.
ಕಾಂಗ್ರೆಸ್ ಮುಕಂಡ ಹಾಗೂ ಸಾಮಾಜಿಕ ಹೋರಾಟಗಾರ ಗೊಟ್ರುವಳ್ಳಿ ದೀಪು ಅವರ ನೇತೃತ್ವದಲ್ಲಿ ಆಯಾ ಗ್ರಾಮ ಪಂಚಾಯತಿ ಮಟ್ಟದ ಬೂತ್ ಗಳಲ್ಲಿ ಸದೃಢವಾಗಿ ಸಂಘಟನೆ ಮಾಡುವ ಸಲುವಾಗಿ ಹಾಗೂ ಜನರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ, ಜೆಡಿಎಸ್ ಪಕ್ಷದ ವಿರುದ್ದ ಹರಿಹಾಯ್ದರು. ಇದೇ ಸಂದರ್ಭದಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ನಂತರ ಮಾಜಿ ಸಚಿವ ಬಿ.ಶಿವರಾಂ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರಜಾದ್ವನಿ ಯಾತ್ರೆ ಆರಂಭವಾಗಿದೆ. ನಮ್ಮ ಪಕ್ಷ ಬಡವರ ಪಕ್ಷ. ಈ ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಪ್ರಜಾಧ್ವನಿ ಆರಂಭವಾಗುತ್ತಿದ್ದಂತೆ ಪ್ರಧಾನಿ ಮೋದಿ ಮತ್ತು ಕೇಂದ್ರದ ಗೃಹ ಮಂತ್ರಿ ಅಮಿತ್ ಷಾಗೆ ಭಯ ಶುರುವಾಗಿ ವಾರಕ್ಕೊಮ್ಮೆ ಬೆಂಗಳೂರಿಗೆ ಬರಲು ಪ್ರಾರಂಭಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿ ಇರುವ ಸರ್ಕಾರ. ಬಿಜೆಪಿಯಯವರು ಸೀರೆ, ಕುಕ್ಕರ್ ಗಡಿಯಾರ, ಹಂಚಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೆ ಸರ್ಕಾರ ಇದ್ದರೂ ಕೂಡ ಎಷ್ಟು ಜನಪರ ಕೆಲಸ ತಂದಿದ್ದಾರೆ. ಯೋಜನೆಗಳ ಮೂಲಕ ಓಟು ಕೇಳಬೇಕೇ ಹೊರತು ಹಣ, ಸೀರೆ ಹಂಚುವ ಮೂಲಕ ಮತದಾರರ ಬಳಿ ಹೋಗಲು ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.
ಸಂಸದ ಪ್ರಜ್ವಲ್ ತಾಲ್ಲೂಕಿಗೆ ಶಿವರಾಂ ಕೊಡುಗೆ ಏನು ಎಂದು ಕೇಳಿದ್ದಾರಂತೆ. ಹಾಗಾದರೆ ಪ್ರಜ್ವಲ್ ಕೊಡುಗೆ ಏನು..? ಎಂದು ಪ್ರಶ್ನೆ ಮಾಡಿದರು. ನಾನು ಗಂಡಸಿ ಕ್ಷೇತ್ರದಲ್ಲಿಅಭಿವೃದ್ದಿ ಮಾಡಿದ್ದೇನೆ. ಗಂಡಸಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಿವರಾಂನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂದು ತನ್ನ ಕ್ಷೇತ್ರವನ್ನೆ ಬದಲಾವಣೆ ಮಾಡಿಸಿದರು. ತಾಲ್ಲೂಕಿನಲ್ಲಿ ರಣಘಟ್ಟ ನೀರಾವರಿ ಯೋಜನೆ ಹೊರತು ಪಡಿಸಿ ಒಂದೇ ಒಂದು ನೀರಾವರಿ ಯೋಜನೆ ಮಾಡಿಲ್ಲ. ನಾನು ನಾಲ್ಕು ಏತನೀರಾವರಿ ಯೋಜನೆಗೆ ಚಾಲನೆ ಕೊಟ್ಟಿದ್ದೆ. ಹಳೇಬೀಡು ಮಾದಿಹಳ್ಳಿ ಏತ ನೀರಾವರಿ ಕಾಂಗ್ರೆಸ್ ಸರ್ಕಾರದ ಕೊಡುಗೆ. ಎತ್ತಿನ ಹೊಳೆ ಯೋಜನೆ ತೋರಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕರಗಡದಿಂದ ಚಿಕ್ಕಮಗಳೂರಿಗೆ ಹಿನ್ನೀರು ಏತನೀರಾವರಿ ಮಾಡುವ ಬದಲು, ಮಲೆನಾಡು ಭಾಗಕ್ಕೆ ಏಕೆ ಮಾಡಲಿಲ್ಲ. ಪ್ರಜ್ವಲ್ ಕಾಂಗ್ರೆಸ್ ಸರ್ಕಾರದ ಬಲದಿಂದ ಗೆದ್ದಿರುವುದು, ಅದು ಅವರಿಗೆ ನೆನಪಿರಲಿ, ಅದನ್ನ ಬಿಟ್ಟು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಜೆಡಿಎಸ್ ವಿರುದ್ದ ಹರಿಹಾಯ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಗೊಟ್ರುವಳ್ಳಿ ದೀಪಕ್ ಮಾತನಾಡಿ, ತಾಲ್ಲೂಕಿನಲ್ಲಿ ಶಾಸಕರ ಅವದಿಯಲ್ಲಿ ಒಂದೆ ಒಂದು ರಸ್ತೆ ಅಭಿವೃದ್ಧಿಯಾಗಿಲ್ಲ. ಚರಂಡಿ, ಶಾಲಾಕಟ್ಟಡಗಳಿಗೆ ಸುಣ್ಣ ಬಣ್ಣ ಹೊಡಿಸಲು ಆಗಿಲ್ಲ. ಕಳೆದ ಬಾರಿ ನಾವೆಲ್ಲರೂ ಸೇರಿ ಗೆಲ್ಲಿಸಿದ್ದೇವೆ. ಆದರೆ ನಮ್ಮ ಭಾಗಕ್ಕೆ ಒಂದು ಕೆಲಸ ಮಾಡಿಲ್ಲ. ಯಗಚಿ ಡ್ಯಾಂ ಕಟ್ಟಿದಾಗಿನಿಂದಲೂ ನೋಡಿದ್ದೇವೆ. ಎಡದಂಡೆ, ಬಲದಂಡೆ ನಾಲೆಗಳ ಮೂಲಕ ನೀರಾವರಿಗೆ ಅನುಕೂಲ ಮಾಡುತ್ತೇವೆ ಎಂದುಹೇಳಿ, ಎಡದಂಡೆ ನಾಲೆಯಿಂದ ಹೊಳೆನರಸಿಪುರಕ್ಕೆ ನೀರು ಹರಿಸಿದರು. ಆದರೆ ಬಲದಂಡೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಮಾತಿಗೆ ಮಾತ್ರ ಸ್ಥಳೀಯರನ್ನ ಗೆಲ್ಲಿಸಬೇಕು ಎಂದು ಹೇಳುತ್ತಾರೆ ಎಂದು ಶಾಸಕರ ವಿರುದ್ದ ಕಿಡಿಕಾರಿದರು.
ಇನ್ನೂ ಬಿಜೆಪಿ ಸರ್ಕಾರ ೪೦ % ಸರ್ಕಾರ. ಯಾವ ಇಲಾಖೆಗೆ ಹೋದರೂ ಅಧಿಕಾರಿಗಳು ಬಡವರನ್ನು ಸುಲಿಗೆ ಮಾಡುತ್ತಿದ್ದಾರೆ. ಶಾಸಕರು ಮಾತ್ರ ಕಮಿಷನ್ ಆಸೆಗೆ ಬಿದ್ದು, ಅಧಿಕಾರಿಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತಿಲ್ಲ. ಬಿ.ಶಿವರಾಮಣ್ಣ ಮಾತ್ರ ಕಳೆದ ಏಳು ವರ್ಷದಿಂದ ಮನೆ, ಮನೆ ತಲುಪಿ ಜನಪರ ಕೆಲಸಗಳನ್ನು ಮಾಡುತ್ತಲೆ ಬಂದಿದ್ದಾರೆ.ಈ ಭಾರಿ ಕಾಂಗ್ರೆಸ್ ಗೆಲ್ಲಿಸಬೇಕು ಎಂದು ದೀಪಕ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ನಿಶಾಂತ್, ಉಪಾಧ್ಯಕ್ಷ. ಸಿ.ಎಸ್. ದಾಸಪ್ಪ ಪುರಸಭಾ ಸದಸ್ಯ ಶಾಂತ ಕುಮಾರ್ ಎಂ.ಆರ್.ವೆಂಕಟೇಶ್, ಜಮಾಲುದ್ದಿನ್ ಹಾಗೂ ಮತ್ತಿತರರು ಭಾಗಿಯಾಗಿದ್ದರು.