ಪುತ್ತೂರು: ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾ.ಪಂ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತರು ಬಿಜೆಪಿಯನ್ನು ಹಿಂದಿಕ್ಕಿದ್ದಾರೆ. ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತಿಲ ಪರಿವಾರದ ಮುಖಂಡ ಅರುಣ್ ಪುತ್ತಿಲ, ಹಣಬಲ, ಹೆಂಡ, ಸೀರೆ ಹಂಚಿ ಮತಗಳಿಸಬಹುದೆಂಬುದನ್ನು ಮತದಾರರು ಈ ಚುನಾವಣೆಯಲ್ಲಿ ಸುಳ್ಳಾಗಿಸಿದ್ದಾರೆ.
ಸ್ವಾರ್ಥ ರಾಜಕಾರಣವನ್ನು ಮತದಾರ ಮೆಟ್ಟಿ ನಿಂತಿದ್ದಾರೆ ಎಂದು ತಿಳಿಸಿದ್ದಾರೆ. ಮೋದಿ, ಯೋಗಿ ಆಡಳಿತ ಮಾದರಿ ರಾಜ್ಯದಲ್ಲಿ ಇರಬೇಕು ಅನ್ನುವುದು ಪರಿವಾರದ ಆಶಯ. ಇದಕ್ಕೆ ಮತದಾರರೂ ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ. ಆರ್ಯಾಪು ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಗಳಿಸಿದ್ದು, ನಿಡ್ಪಳ್ಳಿ ಗ್ರಾ.ಪಂ ನಲ್ಲಿ ಪುತ್ತಿಲ ಪರಿವಾರ ಎರಡನೇ ಸ್ಥಾನ ಪಡೆದಿದೆ.
ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ಪರಿವಾರವನ್ನು ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದು. ಆರ್ ಎಸ್ಎಸ್, ಸ್ವಾಮೀಜಿಗಳು ಮತ್ತು ಸಂಘಟನೆಯಲ್ಲಿ ದುಡಿಯುವ ಪದಾಧಿಕಾರಿಗಳ ನಮ್ಮ ಜೊತೆಗಿದ್ದಾರೆ. ಎಲ್ಲರ ಆಶಯದಂತೆ ಪರಿವಾರವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಅರುಣ್ ಪುತ್ತಿಲ ಹೇಳಿಕೆ ನೀಡಿದ್ದಾರೆ.