ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಪ್ಲಾಟ್ಫಾರ್ಮ್ಗಳನ್ನು ಕೆಲ ದಿನಗಳ ಹಿಂದಷ್ಟೇ ಲೋಕಾರ್ಪಣೆಗೊಳಿಸಲಾಗಿದೆ. ಮಂಗಳೂರು ಗೋವಾ ವಂದೇ ಭಾರತ್ ರೈಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದ ಸಂದರ್ಭದಲ್ಲೇ, ಹೆಚ್ಚುವರಿ ಪ್ಲಾಟ್ಫಾರ್ಮ್ಗಳನ್ನು ಕೂಡ ಲೋಕಾರ್ಪಣೆ ಮಾಡಲಾಗಿತ್ತು.
ಆದರೆ, ಪ್ರಮುಖ ರೈಲುಗಳನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ವಿಸ್ತರಿಸಿ ಪ್ರಯಾಣಿಕರಿಗೆ ನೆರವಾಗಬೇಕು ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಯನ್ನು ರೈಲ್ವೆ ಇಲಾಖೆ ತಿರಸ್ಕರಿಸಿದೆ.
ಮುಂಬೈ ಸಿಎಸ್ಎಂಟಿ-ಮಂಗಳೂರು ಜಂಕ್ಷನ್ ಸೂಪರ್ಫಾಸ್ಟ್, ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್, ವಾರಕ್ಕೊಮ್ಮೆ ಸಂಚರಿಸುವ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ಮತ್ತು ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್ಗೆ ವಿಸ್ತರಿಸುವಂತೆ ವಿವಿಧ ಪ್ರಯಾಣಿಕರ ಸಂಘಟನೆಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಬೇಡಿಕೆಗೆ ಅನುಗುಣವಾಗಿ ಮಂಗಳೂರು ಸೆಂಟ್ರಲ್ನಲ್ಲಿ ನಾಲ್ಕು ಮತ್ತು ಐದನೇ ಪ್ಲಾಟ್ಫಾರ್ಮ್ಗಳ ನಿರ್ಮಾಣ ಮಾಡಲಾಗಿದೆ. ಆದರೆ, ಪ್ಲಾಟ್ಫಾರ್ಮ್ಗಳ ಕೊರತೆ ಮತ್ತು ಖಾಲಿ ಟ್ರ್ಯಾಕ್ಗಳ ಕೊರತೆಯನ್ನು ಉಲ್ಲೇಖಿಸಿ ದಕ್ಷಿಣ ರೈಲ್ವೆ ಬೇಡಿಕೆಯನ್ನು ತಿರಸ್ಕರಿಸಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿಗೆ ಪ್ರತಿಕ್ರಿಯಿಸಿದ ದಕ್ಷಿಣ ರೈಲ್ವೆ ವ್ಯವಸ್ಥಾಪಕ ಆರ್.ಎನ್.ಸಿಂಗ್, ಪ್ಲಾಟ್ಫಾರ್ಮ್ಗಳು ಮತ್ತು ಲಭ್ಯವಿರುವ ಟ್ರ್ಯಾಕ್ಗಳ ಕೊರತೆಯಿಂದಾಗಿ ಪ್ರಮುಖ ರೈಲುಗಳನ್ನು ಸೆಂಟ್ರಲ್ ನಿಲ್ದಾಣಕ್ಕೆ ವಿಸ್ತರಿಸುವುದು ಕಾರ್ಯಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.