ಮಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ ಆದ್ಯತೆ ನೀಡಲಿದೆ. ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ. ಆರ್. ಲೋಬೊ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಪಕ್ಷ. ಸರ್ವಧರ್ಮಗಳನ್ನು, ವಿವಿಧ ಸಂಸ್ಕೃತಿಗಳನ್ನು ರಕ್ಷಣೆ ಮಾಡುವ ಮಹೋನ್ನತ ಧ್ಯೇಯ ಹೊಂದಿರುವ ಪಕ್ಷ. ಬಡವರ ಏಳಿಗೆ ಚಿಂತನೆ ಹೊಂದಿದ ಪಕ್ಷ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ದೇಶದ ಅಭಿವೃದ್ಧಿ ಬಗ್ಗೆ ಉದಾತ್ತ ಚಿಂತನೆ ಹೊಂದಿತ್ತು. ದಕ್ಷಿಣ ಕನ್ನಡದಲ್ಲಿ ಇಂದು ಎಲ್ಲ ವರ್ಗದ ಜನರು ಅನ್ಯೋನ್ಯತೆಯಿಂದ ಜೀವನ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ದಕ್ಷಿಣಕನ್ನಡದಲ್ಲಿ ಭೂಸುಧಾರಣೆ ಕಾನೂನನ್ನು ಸಮರ್ಥವಾಗಿ ಜಾರಿ ಮಾಡಿದ್ದು, ಕಾಂಗ್ರೆಸ್. ನಾನು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ. ಜನಾರ್ದನ ಪೂಜಾರಿ ಅವರು ವಿತ್ತ ಸಚಿವರಾಗಿ ಭೂಸುಧಾರಣೆ, ಋಣಮುಕ್ತ ಕಾನೂನು, ಎಸ್ಸಿ ಎಸ್ಟಿ ಪ್ರೊಟೆಕ್ಷನ್ ಬಿಲ್, ಬ್ಯಾಂಕ್ ರಾಷ್ಟ್ರೀಕರಣ ಕೈಗೊಂಡು ಸುಧಾರಣೆ ಕ್ರಮಗಳು ಬಡವರು ನೆಮ್ಮದಿಯ ಗೌರವಯುತ ಜೀವನ ನಡೆಸುವಂತಾಗಿತ್ತು. ಇದೀಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಾಲ್ಕು ಪ್ರಣಾಳಿಕೆಯನ್ನು ಘೋಷಿಸಿದೆ. ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂ., 10 ಕೆಜಿ ಅಕ್ಕಿ ನೀಡುವ ಕೆಲಸ ಮಾಡಿತ್ತು. ಈಗಿನ ಸರ್ಕಾರ ಅದನ್ನು ಸಮರ್ಪಕವಾಗಿ ಮುಂದುವರಿಸುವ ಕೆಲಸ ಮಾಡಿಲ್ಲ. ಇಂದಿರಾ ಕ್ಯಾಂಟೀನ್ಗೆ ಮರುಜೀವ ನೀಡುವ ಕಾರ್ಯವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಾಡಲಿದೆ. ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಕೆಲಸವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಮಂಗಳೂರು ನಗರ ಶಿಕ್ಷಣ ಕಾಶಿಯಾಗಿದ್ದು,ವಿಶ್ವದ ಎಲ್ಲಕಡೆಯ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ನಿರ್ಭಯದಿಂದ ವಿದ್ಯಾಭ್ಯಾಸ ನಡೆಸುವ ವಾತಾವರಣ ಸೃಷ್ಟಿಯಾಗಬೇಕಿದೆ. ಅಂತಹ ಕಾನೂನು ಸುವ್ಯವಸ್ಥೆ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.