ಉಡುಪಿ: ಕೊಡಿಬೆಂಗ್ರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರನ್ನು ವರ್ಗಾವಣೆಗೊಳಿಸಿರುವುದನ್ನು ಖಂಡಿಸಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಪೋಷಕರು ಇಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಆವರಣದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಎದುರು ಪ್ರತಿಭಟನೆ ನಡೆಸಿದರು.
ಡಯಟ್ ಸಂಸ್ಥೆಯ ಎದುರು ಜಮಾಯಿಸಿದ್ದ ಕೊಡಿಬೇಂಗ್ರೆ ಶಾಲಾ ಮಕ್ಕಳ ಪೋಷಕರು ತಮ್ಮ ಶಾಲೆಯ ಶಿಕ್ಷಕರನ್ನು ವರ್ಗಾವಣೆ ಮಾಡುವ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಪಡಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪೋಷಕರನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಪೋಷಕರು ಮತ್ತು ಪೊಲೀಸರು ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ನಮಗೆ ನ್ಯಾಯ ಸಿಗದೆ ಇಲ್ಲಿಂದ ತೆರಳಲ್ಲ, ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಬಿಗಪಟ್ಟು ಹಿಡಿದರು. ಆಗ ಮಧ್ಯೆ ಪ್ರವೇಶಿಸಿದ ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಡಿ.ಆರ್. ಮಂಜಪ್ಪ ಪ್ರತಿಭಟನಾನಿರತರನ್ನು ಸಮಾಧಾನಪಡಿಸಿ, ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು. ಬಳಿಕ ಪೋಷಕರು ಪ್ರತಿಭಟನೆಯನ್ನು ಕೈಬಿಟ್ಟರು.
ಈ ವೇಳೆ ಮಾತನಾಡಿದ ಪೋಷಕರು, ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಸಮಾನ ಮನಸ್ಕರು ಸಭೆ ನಡೆಸಿ, ಖಾಸಗಿ ಶಾಲೆಯಲ್ಲಿ ಇದ್ದ ನಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಗೆ ಸೇರಿಸಿದ್ದೇವೆ. ಹೀಗಾಗಿ ಇಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಆದರೆ ಸರಕಾರ ಮುಖ್ಯ ಶಿಕ್ಷಕರ ನೇಮಕ ಮಾಡುವ ಭರವಸೆ ನೀಡಿ ಒಂದು ವರ್ಷ ಕಳೆದು ಹೋಯಿತು. ಇನ್ನೂ ಮುಖ್ಯ ಶಿಕ್ಷಕರ ನೇಮಕವಾಗಿಲ್ಲ. ಇದೀಗ ಮತ್ತೆ ಓರ್ವ ಶಿಕ್ಷಕಿಯನ್ನು ಕುಂಟು ನೆಪವೊಡ್ಡಿ ವರ್ಗಾವಣೆ ಮಾಡಿದ್ದಾರೆ. ಇದರಿಂದ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.