ದಿಡುಪೆ: ನೇತ್ರಾವತಿ ನದಿಯು ನೀರಿನ ಹರಿವು ನಿಡಿಗಲ್ ತನಕ ಶುಕ್ರವಾರ ತಲುಪಿದೆ. ಕಳೆದ ಎರಡು ತಿಂಗಳಿನಿಂದ ನೀರಿಲ್ಲದೆ ಸಂಪೂರ್ಣ ಬರಡಾಗಿದ್ದ ನದಿಯ ಹರಿವು ಸಾಮಾನ್ಯ ಮಟ್ಟದಲ್ಲಿದ್ದು,ಕಲ್ಮಂಜ ಗ್ರಾಮದ ಪಜಿರಡ್ಕ ಪ್ರದೇಶದಲ್ಲಿ ಹರಿಯುವ ಮೃತ್ಯುಂಜಯ ನದಿಯ ಜತೆಗೆ ಸಂಗಮ ಸ್ಥಳದತ್ತ ಮುಂದುವರಿದಿದೆ.
ದಿಡುಪೆಯಿಂದ ಕಲ್ಮಂಜ ತನಕ ಸುಮಾರು 20 ಕಿಮೀ. ಪ್ರದೇಶದಲ್ಲಿ ನದಿಯು ಸಂಪೂರ್ಣ ಬತ್ತಿ ಆಟದ ಮೈದಾನದಂತೆ ಕಾಣುತ್ತಿತ್ತು. ನದಿಯ ಹೊಂಡಗಳಲ್ಲಿರುವ ನೀರು ಕೂಡ ಆರಿ ನದಿ ತೀರದ ನಿವಾಸಿಗಳು ಸೇರಿದಂತೆ ಜಲಚರಗಳಿಗೂ ಸಂಕಷ್ಟ ಉಂಟಾಗಿತ್ತು. ಮೇ ತಿಂಗಳ ಮಧ್ಯ ಭಾಗದ ಬಳಿಕ ಪರಿಸ್ಥಿತಿ ಹೆಚ್ಚು ಬಿಗಡಾಯಿಸಿತ್ತು.
ಬಳಿಕ ನದಿ ತೀರದ ಪ್ರದೇಶಗಳಲ್ಲಿ ಆಗಾಗ ಸಾಮಾನ್ಯ ಮಳೆ ಸುರಿದು ಕಳೆದ ಒಂದು ವಾರದ ಹಿಂದೆ ನೇತ್ರಾವತಿ ದಿಡುಪೆ ಪರಿಸರದಿಂದ ಹರಿಯಲು ಆರಂಭವಾಗಿತ್ತು. ಸಾಮಾನ್ಯವಾಗಿ ದಿಡುಪೆಯಲ್ಲಿ ಹರಿಯುವ ಆರಂಭವಾದರೆ ಅಲ್ಲಿಂದ 15 ಕಿಮೀ. ದೂರದಲ್ಲಿರುವ ನಿಡಿಗಲ್ ತಲುಪಲು ಒಂದೆರಡು ದಿನದ ಅವಧಿ ಸಾಕಾಗುತ್ತಿತ್ತು. ಆದರೆ ಈ ಬಾರಿ ನದಿಯ ಹರಿವು ಇಲ್ಲಿಗೆ ತಲುಪಲು ಒಂದು ವಾರಕ್ಕಿಂತ ಹೆಚ್ಚಿನ ಸಮಯ ಬೇಕಾಯಿತು.
ನದಿಯ ಹೊಂಡಗಳು ಈ ಬಾರಿ ಸಂಪೂರ್ಣ ಬತ್ತಿರುವುದು ಒಂದು ಕಾರಣವಾದರೆ,ಈ ನದಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯಾಹತ ಮರಳುಗಾರಿಕೆಯಿಂದ ನದಿಯಲ್ಲಿ ಹೆಚ್ಚಿನ ಹೊಂಡಗಳು ಉಂಟಾಗುತ್ತಿರುವುದು ಕೆಲವು ಕಡೆ ಮರಳು ಸಾಗಾಟಕ್ಕೆ ನದಿಯಲ್ಲಿ ರಸ್ತೆ ನಿರ್ಮಿಸಿದ ಕಾರಣ ನದಿಯು ತನ್ನ ದಿಕ್ಕನ್ನೇ ಕೊಂಚ ಬದಲಾಯಿಸಿರುವುದು, ಅಗತ್ಯ ಸ್ಥಳಗಳಲ್ಲಿ ಹೂಳು ತೆಗೆಯದೆ ನದಿಯು ಗುಪ್ತಗಾಮಿನಿಯಾಗಿ ಹರಿಯುವುದು ಇತ್ಯಾದಿ ವಿಚಾರಗಳು ನದಿ ಹರಿವು ನಿಧಾನಗೊಳ್ಳಲು ಕಾರಣ ಎಂಬುದು ನದಿ ತೀರದ ವಾಸಿಗಳ ಅಭಿಪ್ರಾಯವಾಗಿದೆ.
ಕೃಷಿ ಚಟುವಟಿಕೆಗಳಿಗೂ ಅಡ್ಡಿ
ನದಿಯಲ್ಲಿ ನೀರು ಹರಿಯದೆ ಹಲವು ಕಡೆ ಕೆರೆ,ಬಾವಿಗಳು ಬತ್ತಿದ ಕಾರಣ ಗದ್ದೆ ಕೆಲಸ, ಅಡಕೆ ತೋಟಕೆ ಔಷಧಿ ಸಿಂಪಡಣೆಗೆ ತೊಂದರೆ ಉಂಟಾಗಿತ್ತು. ಆದರೆ ಈಗ ನದಿ ತನ್ನ ಉಗಮ ಸ್ಥಳದಿಂದ ಸಂಗಮದತ್ತ ಹರಿಯುತ್ತಿರುವುದರಿಂದ ಜಲಮೂಲಗಳಲ್ಲಿ ನೀರು ತುಂಬುವ ಸಾಧ್ಯತೆ ಇದ್ದು ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಮೃತ್ಯುಂಜಯದೊಂದಿಗೆ ಸಂಗಮಗೊಳ್ಳಲಿರುವ ನೇತ್ರಾವತಿ ತಗ್ಗು ಪ್ರದೇಶಗಳಲ್ಲಿ ತನ್ನ ಹರಿವನ್ನು ಹೆಚ್ಚಿಸಿಕೊಳ್ಳಲಿದೆ.