ಮುಡಿಪು : ‘ಚುಟುಕು ಸಾಹಿತ್ಯ ಓದುಗರಲ್ಲಿ ಬಹಳಷ್ಟು ಆಸಕ್ತಿ ಮತ್ತು ಪ್ರೀತಿಯನ್ನು ಉಂಟುಮಾಡುತ್ತಿದೆ.ಈ ನಿಟ್ಟಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಬಹಳಷ್ಟು ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಸದ್ದೆಬ್ಬಿಸುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ’ ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇರಾ ಸೋಮನಾಥೇಶ್ವರ ದೇವಸ್ಥಾನದಲ್ಲಿ ಇರಾ ಆಚಿಬೈಲು ಪ್ರಥ್ವಿರಾಜ್ ಸ್ಮರಣಾರ್ಥ ಕಲ್ಲಾಡಿ ವಿಠ್ಠಲ ಶೆಟ್ಟಿ ವೇದಿಕೆಯಲ್ಲಿ ನಡೆದ ಚುಟುಕು ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ವಹಿಸಿದ್ದರು.
ಯುವ ಕವಿ ಗೋಪಾಲಕೃಷ್ಣ ಶಾಸ್ತ್ರೀಯವರ ‘ಚುಟುಕು ಬಂಡಿ’ ಚುಟುಕು ಕವನ ಸಂಕಲನವನ್ನು ಮಂಗಳೂರು ವಿ.ವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಮಾಧವ ಎಂ.ಕೆ ಬಿಡುಗಡೆಗೊಳಿಸಿದರು. ಡಾ.ಸುಭೋದ್ ಭಂಡಾರಿ, ಸುಂದರ ಸುವರ್ಣ,ಕಾರ್ಕಳ ಠಾಣೆಯ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಚುಸಾಪ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಇರಾ ನೇಮು ಪುಜಾರಿಯವರು ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಲತೀಶ್ ಅವರು ವಂದಿಸಿದ ಈ ಕಾರ್ಯವನ್ನು ಅಶೋಕ ಕಡೇಶಿವಾಲಯ ಮತ್ತು ಶ್ರೀಕಲಾ ಕಾರಂತ ಕಾರ್ಯಕ್ರಮ ನಿರೂಪಿಸಿದರು.
ತದನಂತರ ನಡೆದ ಕವಿಗೋಷ್ಠಿ ಯ ಅಧ್ಯಕ್ಷತೆಯನ್ನು ಜನಪ್ರಿಯ ಕವಿ ರಘು ಇಡ್ಕಿದು ವಹಿಸಿದ್ದರು. ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕೂನ ಬಂಟ್ವಾಳ ತಾಲೂಕು ಚುಸಾಪ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನಲವತ್ತು ಮಂದಿ ಕವಿ ಕವಯತ್ರಿಯರು ಕವನ ವಾಚಿಸಿದರು. ಯುವ ಕವಿ ಯೋಗೀಶ್ ಮಲ್ಲಿಗೆ ಮಾಡು ಕಾರ್ಯಕ್ರಮ ನಿರೂಪಿಸಿದರು.
“ಇತ್ತೀಚಿನ ದಿನಗಳಲ್ಲಿ ಚುಟುಕು ಪ್ರಕಾರವು ಓದುಗರೆಡೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆಯುತ್ತಾ ಇದೆ.ಚುಟುಕು ಎಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಹುಟ್ಟಿಕ್ಕೊಂಡಿದ್ದು ಸುಮಾರು ನಲವತ್ತು ವರ್ಷಗಳಿಂದ ನಿರಂತರವಾಗಿ ಚುಟುಕನ್ನು ಬೆಳೆಸುತ್ತಾ ಬಂದಿದೆ”
– ಹರೀಶ್ ಸುಲಾಯ ಒಡ್ಡಂಬೆಟ್ಟು
ಅಧ್ಯಕ್ಷರು,ದಕ್ಷಿಣ ಕನ್ನಡ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತು