ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ವಿವಿಧ ಯೋಜನೆಗಳಿಂದ ಬಂದ ಅನುದಾನದ ಮೂಲಕ ವಿನಿಯೋಗ ಮಾಡಿ ಶಂಕು ಸ್ಥಾಪನೆ ಮಾಡಲಾಗಿದೆ. ಮೂಡುಬಿದಿರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಮಾಡಿ ಪ್ರವಾಸಿತಾಣವನ್ನಾಗಿಸಬೇಕೆಂಬ ನಿಟ್ಟಿನಲ್ಲಿ ಕಡಲಕೆರೆಗೆ ರೂ.9.98 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೊಣಾಜೆಕಲ್ಲುನ್ನು ಪ್ರವಾಸಿತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಲೋಕೋಪಯೋಗಿ ಇಲಾಖೆಯ ರಸ್ತೆ ಸುಧಾರಣೆ ಯೋಜನೆಯಡಿ ಒಟ್ಟು ರೂ.5 ಕೋಟಿ 20ಲಕ್ಷ, ಮೂಡುಬಿದಿರೆ ಪುರಸಭೆಯ 2022-23ರ ಸಾಲಿನ 15 ನೇ ಹಣಕಾಸು ಯೋಜನೆಯ ಮುಕ್ತನಿಧಿ ಅನುದಾನದ ರೂ.2 ಕೋಟಿ 68 ಸಾವಿರ ಮೊತ್ತದ ವಿವಿಧ ಕಾಮಗಾರಿಗಳಿಗೆ ಸ್ಕೌಟ್ಸ್ -ಗೈಡ್ಸ್ ಕನ್ನಡ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿಯಲ್ಲಿ ಮಾರುಕಟ್ಟೆಯ ಕಾಮಗಾರಿಯ ಕೆಲಸವು ಐದಾರು ವರುಷಗಳಿಂದ ಯಥಾಸ್ಥಿತಿಯಲ್ಲಿದೆ. ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಅದರ ಅಭಿವೃದ್ಧಿಯನ್ನು ಮಾಡಲು ನಮ್ಮಿಂದಾಗಲಿ, ಪುರಸಭೆಯಿಂದಾಗಲಿ ಅಸಾಧ್ಯವಾಗಿದೆ. ಆದರೂ ಮಾರುಕಟ್ಟೆ ಆಗಬೇಕೆಂಬ ನಿಟ್ಟಿನಲ್ಲಿ ಸಂಬAಧಪಟ್ಟವರು ಅದರ ಹಿಂದೆ ಬಹಳ ವೇಗವಾಗಿ ಸ್ಪಂದಿಸಿ ಅದಕ್ಕಾಗಿ ಬೇಕಾಗಿರುವ ಎಲ್ಲಾ ಪೂರಕ ದಾಖಲಾತಿಗಳನ್ನು ಒದಗಿಸಲಾಗುತ್ತಿದೆ. ಈ ಸಮಸ್ಯೆಯು ಆದಷ್ಟು ಬೇಗ ಬಗೆಹರಿಯಬಹುದೆಂಬ ನಿರೀಕ್ಷೆಯಿದೆ ಎಂದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಕೇವಲ ಎರಡುವರೆ ವರುಷದಲ್ಲಿ ಏಳು ಕೋಟಿ ರೂಪಾಯಿಯ ಕಾಮಗಾರಿಗಳು ನಡೆದಿದೆ. ಹಾಗೂ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿಯಲ್ಲಿ 2 ಕೋಟಿ ರೂಪಾಯಿಯ ಹೆಚ್ಚಿನ ಅಭಿವೃದ್ದಿ ಕೆಲಸಗಳು ಪೂರ್ಣಗೊಂಡಿದ್ದು, ಇನ್ನೂ ಕೆಲ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದ ಅವರು ನಗರೋತ್ತನ್ನದಲ್ಲಿ 10 ಕೋಟಿಯಲ್ಲಿ 4 ಕೋಟಿ 74 ಲಕ್ಷ ವಿವಿಧ ಕಾಮಗಾರಿಗಳಿಗೆ ಮೀಸಲಿಟಿದ್ದು ಅದರ ಕಾಮಗಾರಿಗಳು ನಡೆಯುತ್ತಿದೆ. ಅಲ್ಲದೇ ಪುರಸಭೆಗೆ ಬರುವ ವೃದ್ಧಾಪ್ಯ ವೇತನ, ಅಂಗವಿಕಲರಿಗಾಗಿ 20 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭಾ ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಮೂಡ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭಾ ಸದಸ್ಯರುಗಳಾದ ರಾಜೇಶ್ ನಾಯ್ಕ್, ಶಕುಂತಲಾ ದೇವಾಡಿಗ ಮತ್ತಿತರ ಪುರಸಭಾ ಸದಸ್ಯರುಗಳು ಉಪಸ್ಥಿತರಿದ್ದರು.
ಮುಖ್ಯಾಧಿಕಾರಿ ಇಂದು.ಎಂ, ಇಂಜಿನಿಯರ್ ಪದ್ಮನಾಭ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.