ಮೂಡುಬಿದಿರೆ: ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ವಿಶ್ವ ಪರಿಸರ ದಿನದಂದು ಪುರಸಭೆಯ ನೇತೃತ್ವದಲ್ಲಿ ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ಸ್ವಚ್ಛತಾ ಆಂದೋಲನ ಸೋಮವಾರ ನಡೆಯಿತು.
ಪುರಸಭಾ ಸದಸ್ಯೆ ಶ್ವೇತಾ ಪ್ರವೀಣ್ ಮತ್ತು ಸ್ಪೂರ್ತಿ ವಿಶೇಷ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಹಸಿರು ನಿಶಾನೆ ತೋರಿಸುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆಯನ್ನು ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಶಿವ ನಾಯ್ಕ್ ಪ್ರತಿಜ್ಞಾವಿಧಿ ಬೋಧಿಸಿದರು. ಪರಿಸರ ಅಭಿಯಂತರೆ ಶಿಲ್ಪಾ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ನನ್ನ ಲೈಫ್ ನನ್ನ ಸ್ವಚ್ಛ ನಗರದ ಪರಿಕಲ್ಪನೆಯೊಂದಿಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಕಸ ಸಂಗ್ರಹಿಸುವಾಗಲೇ ಮೂರು ವಿಧದಲ್ಲಿ ಕಸ ವಿಂಗಡಣೆಯನ್ನು ಮಾಡಲಿದ್ದೇವೆ. ಮರುಬಳಕೆ ಆಗುವ ವಸ್ತುಗಳು, ಅಪಾಯಕಾರಿ ವಸ್ತುಗಳು, ಮರುಬಳಕೆಯಾಗದ ವಸ್ತುಗಳನ್ನು ಪ್ರತ್ಯೇಕವಾದ ಚೀಲಗಳಲ್ಲಿ ಹಾಕಲಾಗುತ್ತದೆ ಎಂದರು.
ನಂತರ ವಿಶೇಷ ಮಕ್ಕಳು ಶಾಲೆಯ ಪರಿಸರ, ಅರಮನೆಬಾಗಿಲು ಹಾಗೂ ಮೂಡುಬಿದಿರೆ ಹನುಮಂತ ದೇವಸ್ಥಾನದ ರಸ್ತೆಯ ಬದಿಗಳಲ್ಲಿ ಸ್ವಚ್ಛತೆಯನ್ನು ನಡೆಸಿದರು.
ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ಸ್ವಾಗತಿಸಿದರು. ಶಿಕ್ಷಕಿ ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.