ಹಾಸನ: ರಾಷ್ಟ್ರೀಯ ಜಾತ್ಯಾತೀತ ಜನತಾದಳ ತವರು ಜಿಲ್ಲೆ ಹಾಸನ. ಭಾರತ ದೇಶಕ್ಕೆ ಕನ್ನಡಿಗ ಪ್ರಧಾನಿಯನ್ನು ನೀಡಿದ ಜಿಲ್ಲೆ ಹಾಸನ. ಅಷ್ಟೆ ಅಲ್ಲದೆ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಯನ್ನು ನೀಡಿದ್ದು ನನ್ನ ಹಾಸನ ಜಿಲ್ಲೆಯೇ, ಜೆ.ಡಿ.ಎಸ್. ಪಕ್ಷ ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಾರಥ್ಯದಲ್ಲಿ ರಾಜಕೀಯ ನಾಯಕರನ್ನು ತಯಾರುಮಾಡುವ ಪಕ್ಷವಾಯಿತು. ಈಗಿನ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಯಲ್ಲಿ ಡಜನ್ಗಟ್ಟಲೆ ನಾಯಕರು ಜೆ.ಡಿ.ಎಸ್. ಪಕ್ಷದಿಂದಲೆ ತಯಾರಾಗಿ ಹೋಗಿದ್ದಾರೆ. ಪ್ರಸ್ತುತ ಜೆ.ಡಿ.ಎಸ್. ಪಕ್ಷದಲ್ಲಿ ಯಾರು ಸಹ ಉಳಿಯಲಿಲ್ಲ ಎಂಬುದು ವಿಪರ್ಯಾಸ.
ರಾಜ್ಯದಲ್ಲಿ ರಾಜಕೀಯ ಪಕ್ಷಗಳು ನೀಡಿದ ಪ್ರಣಾಳಿಕೆಯನ್ನು ತುಲನೆಮಾಡಿದರೆ ಜೆ.ಡಿ.ಎಸ್. ಪಕ್ಷದ ಪಂಚರತ್ನ ಯೋಜನೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಹಳ ಉತ್ತಮ ಪ್ರಣಾಳಿಕೆ. ಆದರೆ ರಾಜ್ಯದ ಕೆಲ ಜನತೆ ಪುಕ್ಕಟ್ಟೆ ಗ್ಯಾರಂಟಿಗೆ ಜೋತುಬಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಯಾಯಿತು ಎಂದು ಜೆ.ಡಿ.ಎಸ್. ಪಕ್ಷದ ನಾಯಕರ ವಾದ.
ಪಕ್ಷಕ್ಕೆ ಸ್ವಂತ ಕಚೇರಿಯೇ ಇಲ್ಲ: ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ಜೀವವನ್ನೆ ಕೊಡುವ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಏಕೈಕ ಪಕ್ಷ ಅಂದರೆ ಅದು ಜೆ.ಡಿ.ಎಸ್. ಪಕ್ಷ ಆದರೆ ಇಂಥ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಜೆ.ಡಿ.ಎಸ್. ಪಕ್ಷಕ್ಕೆ ಜಿಲ್ಲೆಯಲ್ಲಿ ಸ್ವಂತ ಪಕ್ಷದ ಕಚೇರಿ ಇಲ್ಲ ಎಂಬುದು ನಾಚಿಕೆ ತರುವ ಸಂಗತಿ ಎಂದು ಕಾರ್ಯಕರ್ತರು ನೊಂದು ನುಡಿಯುತ್ತಿದ್ದಾರೆ. ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರ ಸ್ಥಿತಿ ಏನಾಗಿದೆ ಅಂದರೆ ಸ್ವಲ್ಪ ದಿವಸ ದೊಡ್ಡೇಗೌಡರ ಮನೆಯಲ್ಲಿ ಜೆ.ಡಿ.ಎಸ್. ಪಕ್ಷದ ಕಚೇರಿ. ಇನ್ನೂ ಸ್ವಲ್ಪ ದಿವಸ ಜವರೇಗೌಡರ ಕಟ್ಟಡದಲ್ಲಿ ಜೆ.ಡಿ.ಎಸ್. ಪಕ್ಷದ ಕಚೇರಿಯಿತ್ತು. ಹಾಗೆಯೆ ಚನ್ನವೀರಪ್ಪನವರ ಮಂಡಿಯಲ್ಲೂ ಸಹ ಜೆ.ಡಿ.ಎಸ್. ಪಕ್ಷದ ಕಚೇರಿಯನ್ನು ತೆರೆಯಲಾಗಿತ್ತು. ಈಗ ಸದ್ಯಕ್ಕೆ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆ.ಡಿ.ಎಸ್. ಪಕ್ಷದ ಕಚೇರಿಯಿದೆ. ನಮ್ಮ ಜೆ.ಡಿ.ಎಸ್. ಪಕ್ಷಕ್ಕೆ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರಿಗೆ ಅಂಥ ಸ್ವಂತ ಕಚೇರಿ ಇಲ್ಲ, ಅವರಿವರ ಮನೆಯ ಬಾಗಿಲನ್ನು ಕಾಯುವುದೆ ನಮ್ಮ ಹಣೆಬರಹ ಎಂದು ಹೆಸರು ಹೇಳಲು ಇಚ್ಛಿಸದ ನಾಯಕರು ಹೇಳಿದ್ದಾರೆ. ಜೆ.ಡಿ.ಎಸ್. ಪಕ್ಷದ ವತಿಯಿಂದ ರಾಜ್ಯಸಭಾ ಸದಸ್ಯರಾದರೂ, ಸಂಸತ್ ಸದಸ್ಯರಾದರೂ, ಶಾಸಕರಾದರೂ, ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಆದರೆ ಯಾರು ಸಹ ಜೆ.ಡಿ.ಎಸ್. ಪಕ್ಷಕ್ಕೆ ಸ್ವಂತ ಕಚೇರಿ ಮಾಡುವ ಯೋಚನೆಯನ್ನೇ ಮಾಡಲೇ ಇಲ್ಲ. ಇದು ಜೆ.ಡಿ.ಎಸ್. ಪಕ್ಷಕ್ಕೆ ಅವರು ಇಟ್ಟಿರುವ ಬದ್ದತೆ ಕಾಣುತ್ತದೆ. ಈಗಲಾದರು ಹಾಸನ ಜಿಲ್ಲಾ ಕೇಂದ್ರದಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಒಂದು ಕಚೇರಿಯನ್ನು ತೆರೆಯಲಿ ಎಂಬುದು ಕಾರ್ಯಕರ್ತರ ಆಶಯವಾಗಿದೆ.