ಮಂಗಳೂರು: ಕರ್ನಾಟಕದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಿಯು ಕಾಲೇಜು ವಿದ್ಯಾರ್ಥಿನಿಯರ ಮುಟ್ಟಿನ ಸ್ವಚ್ಛತೆಗಾಗಿ ಪ್ರಾಯೋಗಿಕವಾಗಿ ನೀಡಿದ್ದ ಮುಟ್ಟಿನ ಕಪ್ಗಳನ್ನು ಹದಿನೈದು ಸಾವಿರ ವಿದ್ಯಾರ್ಥಿನಿಯರಿಗೆ ವಿತರಿಸಲು ಮುಂದಾಗಿದೆ.
ಮಂಗಳೂರಿನಲ್ಲೂ ಸೋಮವಾರ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಚಿತ್ರನಟಿ ಸಪ್ತಮಿ ಗೌಡ, ಶಾಸಕರಾದ ಅಶೋಕ್ ರೈ ಸೇರಿ ನಾಯಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಯೋಜನೆಯು ರಾಜ್ಯಾದ್ಯಂತ ಸುಮಾರು 19 ಲಕ್ಷ ಹದಿಹರೆಯದವರನ್ನು ಒಳಗೊಂಡಿದೆ. ಪ್ರತಿವರ್ಷ ಸರಾಸರಿ 2.23 ಕೋಟಿ ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿತರಿಸಲಾಗುತ್ತಿದೆ.
ಮೈತ್ರಿ ಮುಟ್ಟಿನ ಕಪ್ ಯೋಜನೆಯನ್ನು ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಫಲಿತಾಂಶದ ಆಧಾರದ ಮೇಲೆ ಕಾರ್ಯಕ್ರಮವನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ಕರ್ನಾಟಕವು ಮುಟ್ಟಿನ ನೈರ್ಮಲ್ಯ ನಿರ್ವಹಣೆ ಯೋಜನೆಯಡಿಯಲ್ಲಿ ಮುಟ್ಟಿನ ಕಪ್ ಅನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯವಾಗಿದೆ.
ವಯಸ್ಸಿಗೆ ಅನುಗುಣವಾಗಿ ಮುಟ್ಟಿನ ಕಪ್ ಸಾಧನವು ಹದಿಹರೆಯದ ಹೆಣ್ಣು ಮಕ್ಕಳ ಹಾಗೂ ಮಹಿಳೆಯರು ಸುಲಭವಾಗಿ ಬಳಸಬಹುದು. ವಾಡಿಕೆಯಂತೆ ಬಳಸಲಾಗುವ ಸ್ಯಾನಿಟರಿ ಪ್ಯಾಡ್ ಹಾಗೂ ಟ್ಯಾಂಪೂನ್ಗಳಿಗಿಂತಲೂ ಇದು ಪರಿಣಾಮಕಾರಿ ಹಾಗೂ ಕಲಿಕಾ ವಾತಾವರಣದಲ್ಲಿ ಬಳಕೆಗೆ ಅತಿ ಅನುಕೂಲವಾಗಿದೆ. ಮೆನ್ಸ್ಟ್ರುಯಲ್ ಕಪ್ (ಮುಟ್ಟಿನ ಕಪ್)ಗಳನ್ನು ಅಧಿಕ ಸಮಯದವರೆಗೆ ಅಂದರೆ 8 ರಿಂದ 12 ಗಂಟೆಗಳ ಅವಧಿಯವರೆಗೆ ಬಳಸಬಹುದು. ಸೂಕ್ತ ನಿರ್ವಹಣೆಯೊಂದಿಗೆ 8 ರಿಂದ 10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದು.