ಪುತ್ತೂರು: ದ್ರವ್ಯ(ಡ್ರಗ್ಸ್) ಚಟಗಳು ಯುವ ಸಮುದಾಯವನ್ನು ಹೆಚ್ಚಾಗಿ ಕಾಡುತ್ತಿದೆ. ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಯಬೇಕು. ಡ್ರಗ್ಸ್ ಕುರಿತ ಜನ ಜಾಗೃತಿಗಾಗಿ ಎಲ್ಲಾ ಇಲಾಖೆಗಳ ಸಹಯೋಗ ಅಗತ್ಯವಾಗಿದೆ. ಪ್ರತಿ ತಿಂಗಳ ಮೂರನೇ ಮಂಗಳವಾರ ಉಪವಿಭಾಗ ಮಟ್ಟದಲ್ಲಿ ಈ ಸಭೆಯನ್ನು ನಡೆಸಲಾಗುವುದು ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ತಿಳಿಸಿದರು.
ಮಂಗಳವಾರ ಪುತ್ತೂರು ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ಪರಿಣಾಮ (ಎನ್ಸಿಒಆರ್ಡಿ)ಕುರಿತು ನಡೆದ ಉಪವಿಭಾಗ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡ್ರಗ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಒಮ್ಮೆ ಮಾತ್ರ ನಡೆಸುವುದಲ್ಲ. ಬದಲಿಗೆ ಪ್ರತಿ ತಿಂಗಳು ನಿರಂತರವಾಗಿ ನಡೆಯಬೇಕು. ಶಾಲಾ ಕಾಲೇಜುಗಳಲ್ಲಿರುವ ಎನ್ಸಿಸಿ, ಎನ್ಎಸ್ಎಸ್ಗಳನ್ನು ಬಳಸಿಕೊಳ್ಳಬೇಕು. ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ನ ಬಗ್ಗೆ ಒಂದು ಕೇಸು ವರದಿಯಾದರೂ ಆ ಶಿಕ್ಷಣ ಸಂಸ್ಥೆಗಳ ಕ್ಯರಿಯರ್ ಹಾಳಾಗುತ್ತದೆ. ಅದನ್ನು ತಡೆಯಲು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದರು.
ಮಾದಕ ದ್ರವ್ಯ ತಡೆ ಕಾರ್ಯ ಕೇವಲ ಪೊಲೀಸ್ ಇಲಾಖೆಗೆ ಸೀಮಿತವಲ್ಲ. ಎಲ್ಲಾ ಇಲಾಖೆಗಳು ಇದಕ್ಕಾಗಿ ಕೈ ಜೋಡಿಸಬೇಕು. ಇದು ವಿಸ್ತರಣೆ ಆದಲ್ಲಿ ನಮ್ಮ ಮಕ್ಕಳು ಹಾಳಾಗುವುದು ಎಂಬ ಅರಿವು ನಮಗಿರಬೇಕು. ಡ್ರಗ್ಸ್ ಚಟುವಟಿಕೆ ಪ್ರಕರಣದ ಬಗ್ಗೆ ಯಾರಾದರೂ ಮಾಹಿತಿ ನೀಡಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ಪುತ್ತೂರು ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಗಾನ ಕುಮಾರ್ ಮಾತನಾಡಿ ಶಾಲಾ ಕಾಲೇಜುಗಳ ಬಳಿ, ಪೆಟ್ಟಿ ಅಂಗಡಿಗಳಲ್ಲಿ ಹೆಚ್ಚಾಗಿ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಚೈನ್ ಮಾದರಿಯಲ್ಲಿ ಈ ವ್ಯವಹಾರ ನಡೆಯುತ್ತಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು ಎಂದರು.
ಸಭೆಯಲ್ಲಿ ಪುತ್ತೂರು ತಹಸೀಲ್ದಾರ್ ಶಿವ ಶಂಕರ್, ತಾಪಂ ಯೋಜನಾಧಿಕಾರಿ ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ನಗರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಸಂಪ್ಯ ಠಾಣಾಧಿಕಾರಿ ಧನಂಜಯ, ಉಪ್ಪಿನಂಗಡಿ ಠಾಣಾಧಿಕಾರಿ ರುಕ್ಮ ನಾಯ್ಕ್, ಪುತ್ತೂರು ಉಪವಿಭಾಗದ ಎಸಿಎಫ್ ಸುಬ್ಬಯ್ಯ ನಾಯ್ಕ್, ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಬಿ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು..