ಮಂಗಳೂರು: ನಕಲಿ ಮುಸ್ಲಿಂ ಮಂತ್ರವಾದಿಗಳಿಗೆ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ವಳಾಲು ಎಂಬಲ್ಲಿ ಘಟನೆ ನಡೆದ ಮಾಹಿತಿಯಿದ್ದು, ಗುಜರಿ ವ್ಯವಹಾರ ಮಾಡುತ್ತಿದ್ದ ವ್ಯಕ್ತಿಗಳಿಂದ ಮಂತ್ರವಾದಿಯ ಸೋಗಿನಲ್ಲಿ ವಂಚಿಸಿದ್ದಾರೆ ಎಂಬ ಆರೋಪವಿದೆ.
ಉಪ್ಪಿನಂಗಡಿಯ ಮಗುವಿಗೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮುಸ್ಲಿಂ ಕುಟುಂಬದವರು ಮಂತ್ರವಾದಿಗಳ ಸಂಪರ್ಕ ಮಾಡಿದ್ದು, ವಾರದ ಹಿಂದೆ ಮನೆಗೆ ಹೋಗಿ ಕಪ್ಪು ನೂಲು ಮಂತ್ರಿಸಿ ಮಗುವಿಗೆ ಕಟ್ಟಿದ್ದರು. ಇದೇ ವೇಳೆ ನಕಲಿ ಮಂತ್ರವಾದಿಯ ಪರಿಚಯದ ವ್ಯಕ್ತಿ ಅದೇ ಮನೆಗೆ ಬಂದಿದ್ದರು. ಈ ವೇಳೆ ಇವರ ವಂಚನೆ ಕಂಡು ಮನೆಯಲ್ಲೇ ನಕಲಿ ಮಂತ್ರವಾದಿಗಳ ಮೇಲೆ ಹಲ್ಲೆ ನಡೆಸಲಾಗಿದೆ.
ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ವೈರಲ್ ಆಗಿದೆ. ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಾತುಕತೆಯ ಮೂಲಕ ಬಗೆಹರಿದಿರೋ ಮಾಹಿತಿ ದೊರೆತಿದೆ.