ಮಂಗಳೂರು: ಮದ್ಯಪಾನ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿರುವುದು ಖಂಡನೀಯ. ರಾಜ್ಯ ಸರಕಾರ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುವ ಮೂಲಕ ಅಸಹ್ಯಕರ ಪರಿಸ್ಥಿತಿಯ ನಿರ್ಮಾಣ ಮಾಡಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಒಂದು ಆಘಾತಕಾರಿ ಸುದ್ದಿಯನ್ನು ಘೋಷಣೆ ನೀಡಿದೆ. ಮದ್ಯ ಅಪಾಯಕಾರಿ ಪೇಯ ಎಂಬೂದು ಎಲ್ಲರಿಗೂ ಗೊತ್ತು. ದೇಶಾದ್ಯಂತ ಮದ್ಯಪಾನವನ್ನು ಬ್ಯಾನ್ ಮಾಡಬೇಕು ಎಂದು ಗಾಂಧೀಜಿ ಹೇಳಿದ್ದರು. ಮಹಾತ್ಮ ಗಾಂಧೀಜಿ 75 ವರ್ಷದ ಹಿಂದೆಯೇ ಸಲಹೆ ಕೊಟ್ಟಿದ್ದರು. ಆದರೆ ಮದ್ಯಪಾನವನ್ನೇ ಅನುಸರಿಸಿ ಸರಕಾರಗಳು ರಾಜಕಾರಣ ಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ಕಾರ್ಮಿಕರು ರೈತರು ಮಧ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈ ಆದೇಶವನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು.ಇಲ್ಲದಿದ್ರೆ ಮಹಿಳಾ ಮಂಡಳಿಗಳನ್ನು ಒಳಗೊಂಡು ಶ್ರೀರಾಮ ಸೇನೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.