ಮಂಗಳೂರು: ಸುಳ್ಯ ಬಿ.ಜೆ.ಪಿ. ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಸಂಬಂಧಿಸಿ ಎಸ್.ಡಿ.ಪಿ.ಐ. ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸಿ ಎನ್.ಎ.ಐ. ಕಾರ್ಯಾಚರಿಸುತ್ತಿದೆ ಎಂದು ಎಸ್.ಡಿ.ಪಿ.ಐ. ಮುಖಂಡ ರಿಯಾಜ್ ಕಡಂಬೂರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ರಿಯಾಜ್ ಕಡಂಬೂರು, ನಿರಪರಾಧಿಗಳನ್ನು ಬಂಧಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಎಸ್.ಡಿ.ಪಿ.ಐ. ಮುಖಂಡರಾದ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಆದರೂ ಬಂಧಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಇದರ ವಿರುದ್ಧ ಮಂಗಳೂರಿನಲ್ಲಿ ಆಯೋಜಿಸಿದ ಪ್ರತಿಭಟನೆಗೂ ಪೊಲೀಸರು ಅವಕಾಶ ನಿರಾಕರಿಸಿದರು. ಮುಂದೆ ಜಿಲ್ಲೆಯ ಎಲ್ಲ ಪಟ್ಟಣ ಹಾಗು ಗ್ರಾಮಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದವರು ಹೇಳಿದರು. ಪೊಲೀಸರು ಸರಕಾರದ ಒತ್ತಡದಿಂದ ಕಾನೂನು ಮೀರಿ ವರ್ತಿಸುತ್ತಿದ್ದಾರೆ. ನೋಟೀಸು ನೀಡಿ ವಿಚಾರಣೆಗೆ ಕರೆಯುವ ಬದಲು ನಿರಪರಾಧಿಗಳನ್ನು ಬಂಧಿಸುತ್ತಿದ್ದಾರೆ ಎಂದವರು ಹೇಳಿದರು.
ಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾಧತ್ ಬಜತ್ತೂರು, ಅಕ್ಬರ್ ಬೆಳ್ತಂಗಡಿ, ಆಸಿಫ್ ಕೋಟೆಬಾಗಿಲು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.