ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗಿದ್ದ ಗೃಹ ಬಳಕೆಯ ಕುಡಿಯುವ ನೀರಿನ ಶುಲ್ಕ ಇಳಿಕೆಗೆ ಅಧಿಕೃತ ಆದೇಶ ಬಂದಿದೆ. ಮಂಗಳೂರು ದಕ್ಷಿಣ ಹಾಗೂ ಉತ್ತರ ಶಾಸಕರ ಸತತ ಪ್ರಯತ್ನದ ಫಲವಾಗಿ ಮಹಾನಗರ ಪಾಲಿಕೆಯಲ್ಲಿ ಕೈಗೊಂಡ ನಿರ್ಣಯಕ್ಕೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದೆ.
2020ರ ಆಗಸ್ಟ್ 13ಕ್ಕೆ ಪಾಲಿಕೆಯ ಮೊದಲ ಸಾಮಾನ್ಯ ಸಭೆ ನಡೆಯಿತು. ಈ ಸಂದರ್ಭ ಮೊದಲ ಸಭೆಯಲ್ಲೇ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಹಲವು ಅಂಶಗಳನ್ನು ಅನುಷ್ಠಾನಗೊಳಿಸುವ ಕಾರ್ಯಸೂಚಿ ಮಂಡಿಸಲಾಗಿತ್ತು. ಅದರಲ್ಲಿ ನೀರಿನ ಶುಲ್ಕವನ್ನು ಇಳಿಸುವ ಪ್ರಸ್ತಾಪ ಮಂಡಿಸಿ ಒಪ್ಪಿಗೆ ಪಡೆದು ಅಂಗೀಕಾರಕ್ಕಾಗಿ ರಾಜ್ಯ ಸರಕಾರಕ್ಕೆ ಕಳುಹಿಸಲಾಯಿತು. ಇದಾಗಿ ನೀರಿನ ಶುಲ್ಕ ಇಳಿಕೆ ವಿಚಾರದಲ್ಲಿ ಸರಕಾರ ಮತ್ತು ಪಾಲಿಕೆ ನಡುವೆ ಹಲವು ಪತ್ರ ವ್ಯವಹಾರಗಳು ನಡೆದು ನೀರಿನ ಶುಲ್ಕ ಇಳಿಕೆ ಪ್ರಸ್ತಾಪ ಹಾಗೆಯೇ ಉಳಿದುಕೊಂಡಿತ್ತು.
ಈ ನಡುವೆ 2022ರ ಫೆ.8ರಂದು ನಗರಾಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಿನ ದರ ಪರಿಷ್ಕರಣೆಯಿಂದ ಮಂಗಳೂರು ಪಾಲಿಕೆಗೆ ಆಗಬಹುದಾದ ಆರ್ಥಿಕ ಪರಿಣಾಮವನ್ನು ಗಮನದಲ್ಲಿ ಇಟ್ಟುಕೊಂಡು ಯಾವುದೇ ಆದಾಯ ಅಥವಾ ಯಾವುದೇ ನಷ್ಟ ಆಗದಂತೆ ನೋಡಿಕೊಂಡು ಈ ಬಗ್ಗೆ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿತ್ತು. ಸರಕಾರದ ಮಟ್ಟದಿಂದ ಬಂದ ಹೊಸ ಸೂಚನೆಯನ್ನು ಆಯುಕ್ತರು ಮೇಯರ್ ಗಮನಕ್ಕೆ ತಂದು ಹೊಸ ದರ ಪರಿಷ್ಕರಣೆ ತಯಾರಿಸಿ ಪರಿಷತ್ನ ಅನುಮೋದನೆಗೆ ಮಂಡಿಸುವಂತೆ ಮನವಿ ಮಾಡಿದ್ದರು. ಅದರಂತೆ 2002ರ ಮೇ 31ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ದರ ಪರಿಷ್ಕರಣೆಯ ಹೊಸ ಪಟ್ಟಿಯನ್ನು ಮಂಡಿಸಿ ಅನುಮೋದನೆ ಪಡೆಯಲಾಗಿತ್ತು.
ಹೊಸ ಪರಿಷ್ಕೃತ ದರದ ಪ್ರಕಾರ 20 ಸಾವಿರ ಲೀಟರ್ ನೀರಿನ ಬಳಕೆ ಮಾಡಿದರೆ ಈ ಹಿಂದಿನ 140 ರೂ. ಬದಲಾಗಿ 100 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. 70 ಸಾವಿರ ಲೀಟರ್ ಬಳಕೆ ಮಾಡಿದರೆ 785 ರೂ., 1 ಲಕ್ಷ ಲೀಟರ್ ನೀರಿನ ಬಳಕೆ ವರೆಗೆ 1205 ರೂ. ಹಾಗೂ ಒಂದೂವರೆ ಲಕ್ಷ ವರೆಗೆ ನೀರಿನ ಬಳಕೆಗೆ 1905 ರೂ. ದರ ವಿಧಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಸರಕಾರ ಒಪ್ಪಿಕೊಂಡಿದೆ.
ನ್ಯೂಸ್ ಕನ್ನಡದೊಂದಿಗೆ ಶಾಸಕರಾದ ವೇದವ್ಯಾಸ್ ಕಾಮತ್ ಮಾತನಾಡಿ, ಜನಸಾಮಾನ್ಯರಿಗೆ ನಾವು ನೀಡಿದ ಭರವಸೆಯಂತೆ ಗೃಹ ಬಳಕೆಯ ನೀರಿನ ಶುಲ್ಕ ಇಳಿಸುವತ್ತ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ, ನೀರಿನ ಶುಲ್ಕವನ್ನು ಕಡಿತಗೊಳಿಸುವ ಮೂಲಕ ಬಡ ಜನರ ಮೇಲಿನ ಹೊರೆಯನ್ನು ತಗ್ಗಿಸುವ ಬಗ್ಗೆ ನಾವು ಪಾಲಿಕೆಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿದ್ದೆವು. ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಈ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ಸೂಚಿಸಿ ಅದರಂತೆ ಇಂದು ಅಧಿಕೃತ ಆದೇಶ ಬಂದಿದೆ. ಈ ಮೂಲಕ ಜನಸಾಮಾನ್ಯರಿಗೆ ಆಗುತ್ತಿದ್ದ ದೊಡ್ಡ ಅನಾನುಕೂಲಕ್ಕೆ ಪರಿಹಾರ ಸಿಕ್ಕಿದೆ. ಸದ್ಯ ಒಂದು ವರ್ಷದ ಮಟ್ಟಿಗೆ ಆದೇಶ ಬಂದಿದ್ದು, ಅದನ್ನು ಮುಂದವರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಂಡ ರಾಜ್ಯ ಸರಕಾರಕ್ಕೆ ಧನ್ಯವಾದ ಎಂದರು.