ಮಂಗಳೂರು: ಮಂಗಳೂರಿನ ಶ್ರೀದೇವಿ ಶಿಕ್ಷಣ ಸಂಸ್ಥೆಯ ಫಾರ್ಮಸಿ, ಫಿಸಿಯೋಥೆರಪಿ, ನರ್ಸಿಂಗ್ ಮತ್ತು ಆರೋಗ್ಯ ವಿಜ್ಞಾನ ಸಂಬಂಧಿತ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 19 ಅಕ್ಟೋಬರ್ 2022 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನ ಮಾನಸಿಕ ರೋಗ ವಿಭಾಗದ ಮುಖ್ಯಸ್ಧ ಮತ್ತು ನಗರದ ಮಾನಸ್ವಿ ಹಾಗೂ ವಿನಯ ಆಸ್ಪತ್ರೆಯ ನಿರ್ದೇಶಕರಾದ ಡಾ. ರವಿಷ್ ತುಂಗ ಆರೋಡಿಯವರು ಕಾರ್ಯಕ್ರಮವನ್ನು ಉದ್ಟಾಟಿಸಿದರು.
ರಾಜೀವ್ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಮತ್ತು ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ವಿತರಿಸಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಯು 3 ದಶಕಗಳಿಂದ ಸಾಧಿಸಿದ ಪ್ರಗತಿ ಮತ್ತು ಅಭಿವೃದ್ಧಿಯನ್ನು ಸ್ಮರಿಸಿದರು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಧರು, ಅಧ್ಯಾಪಕರು ಮತ್ತು ನೌಕರ ವೃಂದದವರ ಪಾತ್ರವನ್ನು ನೆನಪಿಸಿ ಮುಂದೆಯೂ ಶಿಕ್ಷಣ ಸಂಸ್ಧೆಯು ಅಭಿವೃದ್ಧಿ ಪತದಲ್ಲಿ ಸಾಗಲಿ ಎಂದು ಶುಭ ಕೋರಿದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಎ. ಸದಾನಂದ ಶೆಟ್ಟಿಯವರು ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಬಹಳ ಮುಖ್ಯ ಎಂದು ಹೇಳಿದರು. ಶ್ರೀದೇವಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ
ಡಾ. ಜಗದೀಶ್ ವಿ. ಕಾಮತ್, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ್ ಪಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಬಿಬಿಯನಾ ವಿಜಯ್, ಆರೋಗ್ಯ ವಿಜ್ಞಾನ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ. ಸೀಮಾರವರು 2021-22 ರ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಗಳನ್ನು ಪ್ರಸ್ತುತ ಪಡಿಸಿದರು. ಶ್ರೀದೇವಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ನಿಧೀಶ್ ಎಸ್ ಶೆಟ್ಟಿ ಉಪಸ್ಧಿತರಿದ್ದರು. ಫಿಸಿಯೋಥೆರಪಿ ಉಪನ್ಯಾಸಕಿಯಾದ ಡಾ. ಅಶ್ವಿನಿ ರೈ ಸ್ವಾಗತಿಸಿದರು. ಫಾರ್ಮಸಿ ವಿಭಾಗದ ಉಪನ್ಯಾಸಕಿ ರೆಹಬ್ ತೋನ್ಸೆ ವಂದಿಸಿದರು. ಉಪನ್ಯಾಸಕಿಯರಾದ ಡಾ. ದಿಶಾ ಮತ್ತು ಶ್ರೀಮತಿ ಸಂಗೀತಾ ಕಾರ್ಯಕ್ರಮ ನಿರ್ವಹಿಸಿದರು.