ಮಂಗಳೂರು: ಸಮಾಜದ ನಿರ್ಲಕ್ಷಿತ ವರ್ಗಗಳನ್ನು ತಲುಪಲು ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನದ ಹೊಸ ಯೋಜನೆಯಡಿ ನಗರದ ಪಚ್ಚನಾಡಿಯಲ್ಲಿ ವಾಸಿಸುವ ೧೨ ತ್ಯಾಜ್ಯ ಸಂಗ್ರಹಿಸುವ ಕುಟುಂಬಗಳಿಗೆ ಅಗತ್ಯ ಒಳಾಂಗಣ ಸೌರ ದೀಪಗಳನ್ನು ರೂ. ೧,೨೬,೦೦೦ ವೆಚ್ಚದಲ್ಲಿ ಅಳವಡಿಸಿದೆ.
ಈ ಯೋಜನೆಯು ವಿಶೇಷವಾಗಿ ಸುಮಾರು ೨೦ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ. ಈ ಕುಟುಂಬಗಳು ಹಲವು ವರ್ಷಗಳಿಂದ ತಮ್ಮ ವಸತಿ ಗೃಹಗಳಿಗೆ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಕತ್ತಲಲ್ಲಿಯೇ ಜೀವನ ನಡೆಸುತ್ತಿದ್ದರು.
ವಿಷಜಂತುಗಳ ಭಯದಲ್ಲಿ ಕುಟುಂಬಗಳು ಬದುಕುತಿದ್ದವು. ರಾತ್ರಿ ವೇಳೆ ಮಕ್ಕಳು ಓದಲು ಕಷ್ಟಪಡುತ್ತಿದ್ದರು. ಈ ಕುಟುಂಬಗಳ ದುಃಸ್ಥಿತಿಯ ಬಗ್ಗೆ ತಿಳಿದ ನಂತರ, ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನ ಸೌರ ದೀಪಗಳನ್ನು ಪೂರೈಸುವ ಯೋಜನೆಯನ್ನು ರೂಪಿಸಿತು ಮತ್ತು ಸೆಲ್ಕೊ ಪ್ರತಿಷ್ಠಾನದ ಅಂಗಸಸ್ಥೆಯಾದ ಸೆಲ್ಕೋ ಇಂಡಿಯಾ ಕಡಿಮೆ ದರದಲ್ಲಿ ಸೌರ ದೀಪಗಳನ್ನು ಒದಗಿಸಿತು. ಸ್ಥಳೀಯ ಮತ್ತು ಅನಿವಾಸಿ ದಾನಿಗಳು ಯೋಜನೆಗೆ ಬಾಕಿ ಹಣವನ್ನು ಒದಗಿಸಿದ್ದಾರೆ.
ಯೋಜನೆಯು ಸೆಪ್ಟೆಂಬರ್ ೨೮, ೨೦೨೨ ರಂದು ಯಶಸ್ವಿಯಾಗಿ ಪೂರ್ಣಗೊಂಡಿತು. “ನಗರವನ್ನು ಸ್ವಚ್ಛವಾಗಿಡುವಲ್ಲಿ ತ್ಯಾಜ್ಯ ಸಂಗ್ರಹಿಸುವವರು ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಅವರನ್ನು ‘ಅನೌಪಚಾರಿಕ ನಗರ ಸೌಂದರ್ಯವರ್ಧಕರು’ ಎಂದು ಪರಿಗಣಿಸುತ್ತೇವೆ. ಅವರು ಉತ್ತಮ ಗುಣಮಟ್ಟದ ಜೀವನಕ್ಕೆ ಅರ್ಹರು.
ಸೌರ ಬೆಳಕನ್ನು ಒದಗಿಸುವುದರಿಂದ ಅವರು ಸುರಕ್ಷಿತವಾಗಿ ಬದುಕಲು ಸಾಧ್ಯವಾಗುತ್ತದೆ. ಅವರ ಮಕ್ಕಳು
ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ ಜೀವನದಲ್ಲಿ ಮೇಲೇರಲು ಸಾಧ್ಯ,” ಎಂದು ಯೋಜನೆಯ ಪ್ರಮುಖ ದಾನಿಗಳಲ್ಲೊಬ್ಬರಾದ ಎಪಿಡಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ಲಾ ಎ. ರೆಹಮಾನ್ ಹೇಳಿದ್ದಾರೆ.
ರವಿ ಕರ್ಕೇರ, ಸಂತೋಷ್ ಶೆಟ್ಟಿ, ಸದಾಶಿವ ಪೂಜಾರಿ, ಸತೀಶ್ ಸಾಲಿಯಾನ್, ಸಂದೀಪ್ ಚೌಧರಿ, ಗುರುರಾಜ್ ಪೂಜಾರಿ, ವಿರಾಜ್ ಶೆಟ್ಟಿ, ಯೋಗೀಶ್ ಪೂಜಾರಿ, ರೆಮ್ಮಿ ಲೋಬೋ ಮತ್ತು ಅಶ್ವಿನಿ ದಿನೇಶ್ ಇತರ ದಾನಿಗಳಾಗಿದ್ದಾರೆ. ಯೋಜನೆಯನ್ನು ಹಸಿರು ದಳದಿಂದ ನಾಗರಾಜ್ ಅಂಚನ್, ರೂಪಕಲಾ ಮತ್ತು ಹೇಮಚಂದ್ರ ಮತ್ತು ಎಪಿಡಿ ಪ್ರತಿಷ್ಠಾನದಿಂದ ಗೀತಾ ಸೂರ್ಯ ಸಂಯೋಜಿಸಿದ್ದಾರೆ.