ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ ನಂದಗೋಪಾಲ ಶೆಣೈ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಇದನ್ನು ಸಮರ್ಪಕವಾಗಿ ಅಳವಡಿಸಿದಾಗ ಮಕ್ಕಳ ಬೆಳವಣಿಗೆ ಸಾಧ್ಯ. ಮಗುವಿನಂತಹ ಮನಸ್ಸನ್ನು ನಾವೆಲ್ಲರೂ ಹೊಂದಬೇಕು. ಏಕೆಂದರೆ ಮಗು ಯಾವಾಗಲು ಪ್ರಶ್ನೆ ಮಾಡುವ ಗುಣವನ್ನು ಹೊಂದಿರುತ್ತದೆ.ಕಲಿಕೆ ಎಂಬುವುದು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಮನಸ್ಥಿತಿಯನ್ನು ಎಲ್ಲರೂ ಜೀವನದುದ್ದಕ್ಕೂ ಅಳವಡಿಸಬೇಕೆಂದು ಹೇಳಿದರು.
ನಾವು ಕನಸು ಕಾಣಬೇಕು ಆದರೆ ಕನಸು ಜೀವನವನ್ನು ಬದಲಾವಣೆ ಮಾಡದಿದ್ದರು ಇಚ್ಛೆ ಮಾತ್ರ ಜೀವನವನ್ನು ಬದಲಾಯಿಸುತ್ತದೆ. ಆದರೆ ಪರಿಶ್ರಮ ನಿರಂತರವಾಗಿದ್ದಾಗ ಅದು ಸಂಪೂರ್ಣ ಜೀವನವನ್ನೆ ಬದಲಾಯಿಸುತ್ತದೆ. ನಮ್ಮೆಲ್ಲರಲ್ಲಿ ಸಮರ್ಪಣಾ ಮನೋಭಾವನೆ ನಿರಂತರವಾಗಿರಬೇಕೆಂದು ಅವರು ಕರೆ ನೀಡಿದರು.
ಮಕ್ಕಳಲ್ಲಿ ಆಹಾರವನ್ನು ಎಸೆಯುವ ಗುಣವನ್ನು ಶೂನ್ಯಕ್ಕೆ ತರುವಲ್ಲಿ ಪೋಷಕರು ಪ್ರಯತ್ನಪಡಬೇಕು. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಸ್ಥಿತಿ ಮುಂದೆ ಸಮಾಜದಲ್ಲಿ ಬರಬಾರದೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಆಡಳಿತಾಧಿಕಾರಿ ಡಾ. ಕೆ.ಸಿ ನಾಯ್ಕ್ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಶಿಕ್ಷಣವನ್ನು ಕೊಡುವುದರ ಮೂಲಕ ದೇಶ ಪ್ರೇಮಿಗಳನ್ನಾಗಿ ಮಾಡುವುದು ನಮ್ಮ ಮೊದಲ ಉದ್ದೇಶವೆಂದು ಹೇಳಿದರು. ಈ ಉದ್ದೇಶವು ಸಾಕಾರಗೊಳ್ಳುತ್ತ ಬರುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಯ್ಕ್ ಮಾತನಾಡಿ ಶಕ್ತಿ ಶಿಕ್ಷಣ ಸಂಸ್ಥೆಯು ಮಕ್ಕಳಲ್ಲಿ ಸಂಸ್ಕಾರ ಕೊಡುವ ಕಾರ್ಯವನ್ನು ವಿದ್ಯಾಭಾರತಿ ಮೂಲಕ ಮಾಡುತ್ತಿದೆ. ಇದರ ಜೊತೆಗೆ ಸಂಸ್ಕೃತವನ್ನು ಎಲ್ಲರಿಗೂ ಕಲಿಸುವ ಕಾರ್ಯವನ್ನು ಮಾಡಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮ ಶಕ್ತಿಯನ್ನು ವೃದ್ಧಿಸುವ ಒಂದು ಪ್ರಯತ್ನವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಪೆಟ್ರಿಷಿಯ ಪಿಂಟೊ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು.