ಮಂಗಳೂರು: ಉತ್ತರ ವಿಧಾನ ಸಭೆ ವ್ಯಾಪ್ತಿಯಲ್ಲಿ ಹಿಂದಿನ ಶಾಸಕರು 525 ಕೋಟಿ ರೂ. ಅಭಿವೃದ್ಧಿ ಕಾರ್ಯ ನಡೆಸಿದ್ದು, ನನಗೆ ಸಿಕ್ಕ ಅಲ್ಪ ಅವಧಿಯಲ್ಲಿ 2250 ಕೋಟಿ ರೂ. ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಅಭಿವೃದ್ಧಿಗಿಂತಲೂ ಹೆಚ್ಚಾಗಿ 6500 ಮಂದಿಗೆ ಹಲವು ವರ್ಷಗಳಿಂದ ಬಾಕಿಯಿದ್ದ ಹಕ್ಕು ಪತ್ರ ಒದಗಿಸಲು ಕ್ರಮ ಕೈಗೊಂಡಿದ್ದೇನೆ ಎಂದು ಶಾಸಕ ವೈ. ಭರತ್ ಶೆಟ್ಟಿ ಹೇಳಿದರು.
ಬಿಜೆಪಿ ಮಂಗಳೂರು ಉತ್ತರ ಶಕ್ತಿ ಕೇಂದ್ರ 1,2ರವತಿಯಿಂದ ಮಂಗಳವಾರ ಸುರತ್ಕಲ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಸಂದರ್ಭ ಎರಡು ವರ್ಷ ಉದ್ಯಮಿಗಳ ನೆರವಿನಿಂದ ಅಗತ್ಯವಿದ್ದವರಿಗೆ ಕಿಟ್ ನೀಡಲಾಗಿದೆ ಎಂದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಪರಿವರ್ತನೆಯತ್ತ ಸಾಗುತ್ತಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ 17 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಜಯಗಳಿಸಿದೆ. ತ್ರಿಪಲ್ ತಲಾಖ್ ವಿಚಾರದಲ್ಲಿ ಮುಸ್ಲಿಂ ಮಹಿಳೆಯರು ಬಿಜೆಪಿ ಮತ ಹಾಕಿರುವುದು ಈ ನಿಟ್ಟಿನಲ್ಲಿ ಖಚಿತವಾಗಿದೆ ಎಂದರು.
ಬಿಜೆಪಿಗೆ ಸೇರ್ಪಡೆಗೊಂಡ ಸತೀಶ್ ಸುವರ್ಣ ಅವರನ್ನು ಪಣಂಬೂರು ಅವರನ್ನು ಇದೇ ಸಂದರ್ಭ ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.
ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ರಾಜ್ ಕೃಷ್ಣಾಪುರ ಪ್ರಸ್ತಾಪಿಸಿದರು. ಮೇಯರ್ ಜಯಾನಂದ ಅಂಚನ್, ಬಿಜೆಪಿ ಶಕ್ತಿ ಕೇಂದ್ರ 1ರ ಅಧ್ಯಕ್ಷ ಮಹೇಶ್ ಮೂರ್ತಿ ಸುರತ್ಕಲ್, ಶಕ್ತಿ ಕೇಂದ್ರ 2ರ ಅಧ್ಯಕ್ಷ ವಿಠಲ ಸಾಲ್ಯಾನ್ ಮೊದಲಾದವರಿದ್ದರು.