ಮಂಗಳೂರು: ಅಖಂಡವಾಗಿದ್ದ ಭಾರತದಿಂದ ಅನೇಕ ದೇಶಗಳು ಪ್ರತ್ಯೇಕವಾಗಿವೆ. ಹೀಗಾಗಿ ಭಾರತ್ ಜೋಡೋ ಯಾತ್ರೆ ಬಗ್ಗೆ ಅಪವಾದ ಮಾಡುವವರು ತಮ್ಮ ಮೆರವಣಿಗೆಯನ್ನು ಬರ್ಮಾ, ಬಾಂಗ್ಲಾದೇಶ ಸೇರಿ ಅಖಂಡವಾಗಿದ್ದ ಇತರ ದೇಶಗಳಲ್ಲಿ ಹೋಗಿ ನಡೆಸಲಿ. ಅವರನ್ನು ಯಾರೂ ತಡೆಯಲಾರರು ಎಂದು ಮಾಜಿ ಸಚಿವ ರಮಾನಾಥ್ ರೈ ಕಿಡಿಕಾರಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಟೀಕೆಗೆ ಅವರದ್ದೇ ಧ್ವನಿಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದಾರೆ. ಯಾತ್ರೆ ಇದೀಗ ತೆಲಂಗಾಣ ಪ್ರವೇಶಿಸಿದ್ದು, ಪಾದಯಾತ್ರೆಯುದ್ದಕ್ಕೂ ಎಲ್ಲಾ ವರ್ಗದ ಜನ ಅವರನ್ನು ಸ್ವಾಗತಿಸುವ ಮೂಲಕ ಯಶಸ್ವಿಯಾಗಿ ಸಾಗುತ್ತಿದೆ.
ರಾಹುಲ್ರವರು ತಮ್ಮ ಯಾತ್ರೆಯುದ್ದಕ್ಕೂ ಪ್ರೀತಿ ತೋರಿಸುತ್ತಿದ್ದಾರೆ. ಆದರೆ, ಬಿಜೆಪಿಯವರು ರಥಯಾತ್ರೆ ಮಾಡಿ ರಕ್ತದೋಕುಳಿ ಹರಿಸಿದ್ದರು ಎಂದು ಆರೋಪಿಸಿದರು.