ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆಯುವ ಗಲಭೆಗೆ ಈಶ್ವರಪ್ಪ ಕಾರಣ. ಆರ್ ಎಸ್ ಎಸ್ ಕಾರ್ಯಕರ್ತರು ರಾಜ್ಯದಲ್ಲಿ ಕಾನೂನನ್ನ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಅವರು ಶಿವಮೊಗ್ಗದ ಖಾಸಗಿ ಕಾರ್ಯಕ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕಾರ ಹೆಚ್ಚಾಗಿದೆ. ಇದರಿಂದ ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟಾಗುತ್ತಿದೆ ಎಂದು ತಿಳಿಸಿದರು.
ಧರ್ಮದ ನಡುವೆ ಸಂಘರ್ಷ ಉಂಟಾಗಿರುವುದರಿಂದ ಇದರಿಂದ ಜನರ ಮನಸ್ಸು ಒಡೆದು ಹೋಗಿದೆ. ಈ ಪ್ರವೃತ್ತಿ ಕಳೆದ 8 ವರ್ಷದಿಂದ ಹೆಚ್ಚಾಗಿದೆ. ಆರ್ ಎಸ್ ಎಸ್ ಕಾರ್ಯಕರ್ತರು ಕಾನೂನನ್ನ ಕೈಗೆತ್ತಿಕೊಂಡಿದ್ದಾರೆ. ಅಮಾಕರ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗುತ್ತಿದೆ ಎಂದು ಹೇಳಿದರು.
ಹೆಣದ ಮೇಲೆ ರಾಜಕಾರಣ ಮಾಡಲಾಗುತ್ತಿದೆ. ಹೊನ್ನಾವರದಲ್ಲಿ ಪರೇಶ್ ಮೆಸ್ತಾನ ಸಾವಿನ ಪ್ರಕರಣವನ್ನ ಕೊಲೆ ಎಂದು ಬಿಂಬಿಸಲಾಗಿತ್ತು. ನಾನು ಸಿಬಿಐಗೆ ಪ್ರಕರಣ ವಹಿಸಿದಾಗ ಕಾಂಗ್ರೆಸ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ ಎಂದು ಬಿಜೆಪಿ ಆರೋಪಿಸಿದರು. ಜೆಡಿಎಸ್ ಚೋರ್ ಬಜಾವೋ ಇನ್ ವೆಸ್ಟಿಗೇಷನ್ ಎಂದಿತ್ತು. ಈಗ ವರದಿ ಏನು ಬಂದಿದೆ. ಅದೊಂದು ಆಕಸ್ಮಿಕ ಸಾವು ಎಂದು ಬಂದಿದೆ.
ನಾನು ಅಂದೇ ಹೇಳಿದ್ದೆ ಅದೊಂದು ಸಹಜ ಸಾವು ಎಂದು ಬಿಜೆಪಿ ಕೊಲೆ ಎಂದು ಆರೋಪಿಸಿತು. ಈಗ ಸಿದ್ದರಾಮಯ್ಯ ಸಾಕ್ಷಿ ನಾಶ ಮಾಡಿರುವುದಾಗಿ ಹೇಳುತ್ತಿದೆ. ಇವರದೇ ಪಿಎಂ ಮತ್ತು ಗೃಹ ಸಚಿವರು ಕೇಂದ್ರದಲ್ಲಿ ಇದ್ದಾರೆ. ಆರೋಪ ಮಾತ್ರ ಸಿದ್ದರಾಮಯ್ಯನ ಮೇಲೆ ಮಾಡಿ ಜನರನ್ನ ದಿಕ್ಕುತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 3 ವರ್ಷದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದೆ ಒಂದೇ ಒಂದು ಪ್ರಕರಣವನ್ನ ಸಿಬಿಐಗೆ ನೀಡಲಿಲ್ಲ. ನಾನು ಕೇಂದ್ರದಲ್ಲಿ ಬಿಜೆಪಿ ಇದ್ದರೂ ಸಿಬಿಐಗೆ ಪರೇಶ್ ಮೆಸ್ತಾನ ಪ್ರಕರಣ ನೀಡಿ ನಿಷ್ಪಕ್ಷ ಪಾತ ತನಿಖೆ ನಡೆಸಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ನಡೆಯುವ ಗಲಭೆಗೆ ಈಶ್ವರಪ್ಪ ಕಾರಣ
ಶಿವಮೊಗ್ಗದಲ್ಲಿ ನಡೆಯುವ ಗಲಭೆಗೆ ಈಶ್ವರಪ್ಪ ಕಾರಣವೆಂದು ನೇರವಾಗಿ ಆರೋಪಿಸಿರುವ ಸಿದ್ದರಾಮಯ್ಯ ಹರ್ಷನ ಕೊಲೆ ಪ್ರಕರಣದಲ್ಲಿ ಶವಯಾತ್ರೆಯ ದಿನ 144 ಸೆಕ್ಷನ್ ಜಾರಿ ಇದ್ದರೂ ಮೆರವಣಿಗೆ ನಡೆಸಿ ಗಲಭೆ ಉಂಟಾಗುವಂತೆ ಮಾಡಿದ್ದಾರೆ ಎಂದು ಹೇಳಿದರು.
ಶ್ರೀ ರಾಮುಲು ಪೆದ್ದ
ಮೀಸಲಾತಿ ಹೆಗ್ಗಳಿಕೆ ಬಗ್ಗೆ ಶ್ರೀರಾಮುಲು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನಾನು ಅವರನ್ನ ಪೆದ್ದ ಎಂದು ಕರೆದಿದ್ದೇಕೆ ಎಂದರೆ ನಾಗಮೋಹನ್ ದಾಸ್ ವರದಿಯನ್ನ ಜಾರಿಗೆ ತರುತ್ತೇವೆ ಇದನ್ನ ರಕ್ತದಲ್ಲಿ ಬರೆದುಕೊಡುತ್ತೇವೆ ಎಂದು ಹೇಳಿದ್ದರು. ಈಗ ರಕ್ತಖಾಲಿಯಾಗಿದೆಯಾ ಎಂದು ಪ್ರಶ್ನಿಸಿದರು.
ನಾಗಮೋಹನ್ ದಾಸ್ ವರದಿ ರಚನೆಗೆ ಸಮ್ಮಿಶ್ರ ಸರ್ಕಾರದ ಕಾಣಿಕೆ ಇದೆ. ಈಗ ಬಿಜೆಪಿ ಎಸ್ ಸಿ ಮೀಸಲಾತಿ ಹೆಚ್ಚಿಸಿರುವುದೆಂದು ಬೀಗುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ವರದಿ ಏನು ಬಂದಿದೆ ಅದನ್ನ ಬಿಜೆಪಿ ಮಾಡಿದೆ ಅಷ್ಟೆ ಎಂದರು.
ನನ್ನ ಸ್ಪರ್ಧೆ ಖಚಿತ ಪಡಿಸುವೆ
ಬಾದಾಮಿ, ಕೋಲಾರ, ವರುಣಾ ಕ್ಷೇತ್ರ ಸೇರಿದಂತೆ ಆರೇಳು ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ವರುಣಾದಿಂದ ಪುತ್ರ ಯತೀಂದ್ರ ಸ್ಪರ್ಧಿಸಿದ್ದಾರೆ. ನನ್ನ ಚುನಾವಣ ಕ್ಷೇತ್ರವನ್ನ ಇನ್ನು ಒಂದು ತಿಂಗಳಲ್ಲಿ ಪ್ರಕಟಿಸುವೆ ಎಂದರು.
ಬಿಜೆಪಿಯವರು ನನಗೆ ಕ್ಷೇತ್ರವೇ ಇಲ್ಲ ಹಾಗಾಗಿ ಒಂದು ಕ್ಷೇತ್ರದ ಹೆಸರು ಪ್ರಕಟಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲವೆಂದು ಆರೋಪಿಸುತ್ತಿದೆ. ಪ್ರಧಾನಿ ಮೋದಿ ಗುಜರಾತ್ ಮತ್ತು ವಾರಣಾಸಿಯಿಂದ ಸ್ಪರ್ಧಿಸಿದರು. ಆಗ ಒಂದು ವ್ಯಾಖ್ಯಾನ ಮಾಡಿದ್ದ ಬಿಜೆಪಿ ಸಿದ್ದರಾಮಯ್ಯ ಎರಡುಕಡೆ ಸ್ಪರ್ಧಿಸಿದಾಗ ಬೇರೆ ವ್ಯಾಖ್ಯಾನ ಮಾಡುತ್ತಿದೆ ಎಂದು ದೂರಿದರು