ಮಂಗಳೂರು: ವಿಧಾನಸಭಾ ಚುನಾವಣೆ ಸತ್ಯ ಮತ್ತು ಅಸತ್ಯದ ಚುನಾವಣೆ ಆಗಿತ್ತು. ಆದರೆ ಕರ್ನಾಟಕದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು ದ್ವೇಷ ರಹಿತ ಅಭಿವೃದ್ಧಿ ಯನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ಕರ್ನಾಟಕದ ಜನತೆ ಸರ್ಕಾರ ಮೇಲಿನ ನೋವನ್ನು ಮತದಾನದ ಮೂಲಕ ಹೊರಹಾಕಿದ್ದಾರೆ. ಉಳ್ಳಾಲದಿಂದ ಐದನೇ ಬಾರಿಗೆ ಅತ್ಯಧಿಕ ಮತಗಳಿಂದ ಜನ ಗೆಲ್ಲಿಸಿದ್ದಾರೆ. ಜನ ನನ್ನ ಮೇಲೆ ಇಟ್ಟ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕೆಲಸ ಮಾಡುತ್ತೇನೆ ಎಂದರು.
ಕರಾವಳಿಯಲ್ಲಿ ಹೆಚ್ಚಿನ ವಿಶ್ವಾಸವನ್ನು ನಾವು ಗಳಿಸಬೇಕಿದೆ. ಇನ್ನು ಐದು ವರ್ಷದಲ್ಲಿ ಕಾಂಗ್ರೆಸ್ ಕೆಲಸದ ಮೂಲಕ ಜನರ ವಿಶ್ವಾಸವನ್ನು ಗಳಿಸಲಿದೆ ಎಂದು ಹೇಳಿದರು.
ಚುನಾವಣೆ ಒಂದೇ ಅಜೆಂಡಾ ದಲ್ಲಿ ನಡೆಯುವುದಿಲ್ಲ. ಉಡುಪಿ-ದ.ಕ ಜಿಲ್ಲೆಯಲ್ಲಿ ಆತ್ಮಾಲೋಕನ ಮಾಡಿದ್ದೇವೆ. ನಾವು ಗೆದ್ದ ಗುಂಗಿನಲ್ಲಿದ್ದೇವೆ. ಸ್ಥಳೀಯ ಮಟ್ಟದ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲೂ ಅಪಪ್ರಚಾರ ಜಾಸ್ತಿಯಾಗಿದೆ. ಇಲ್ಲದಿದ್ದರೆ ಐವತ್ತು ಸಾವಿರಕ್ಕಿಂತ ಅಧಿಕ ಮತದಲ್ಲಿ ಗೆಲ್ಲುತ್ತಿದ್ದೆ. ಕಳೆದ ಬಾರಿಗೆ ಹೆಚ್ಚಿನ ಲೀಡ್ ಗೆ ನಾನು ಆಯ್ಕೆಯಾಗಿದ್ದೇನೆ ಎಂದರು.
ಪೊಲಿಟಿಕ್ಸ್ ಅನ್ನೋದು ಮೆಥಮ್ಯಾಟಿಕ್ಸ್ ಅಲ್ಲ. ಪೊಲಿಟಿಕ್ಸ್ ಅನ್ನೋದು ರಿಯಾಕ್ಷನ್. ಎಸ್ ಡಿ ಪಿ ಐ ಯಿಂದ ನಮಗೆ ಲಾಭ ಆಗಿದೆ.
ತನ್ವೀರ್ ಸೇಠ್ ವಿರುದ್ಧವೂ ಸ್ಪರ್ಧೆ ಮಾಡಿದ್ದಾರೆ. ಈ ಬಾರಿ ಸ್ಪರ್ಧೆಯಲ್ಲಿ ಸೇಠ್ ಅತ್ಯಧಿಕ ಮತಗಳಿಂದ ಗೆದ್ದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ ಶಾಸಕ ಇರುವ ಕ್ಷೇತ್ರಕ್ಕೆ ಕಡಿಮೆ ಅನುದಾನ ಕೊಡುತ್ತಿದ್ದರು. ನಾನು ಮನವಿ ಕೊಟ್ಟಾಗ ಕೆಲಸ ಆಗುತ್ತಿರಲಿಲ್ಲ. ಏಜೆಂಟ್ ಮೂಲಕ ಮನವಿ ಕೊಟ್ಟಾಗ ಕೆಲಸ ಆಗುತಿತ್ತು. ಈಗ ಅವರು ಮಾಡಿದ್ದನ್ನೇ ನಾವು ಮಾಡಬೇಕೆಂದು ಅನ್ನಿಸುತ್ತದೆ. ಕೆಲವೊಮ್ಮೆ ಜನರಿಗೆ ಮೋಸ ಮಾಡೋದು ಬೇಡ ಅಂತಾ ಅನ್ನಿಸುತ್ತದೆ ಎಂದರು.
ಕೇಂದ್ರ ದಿಂದ ರಾಜ್ಯಕ್ಕೆ ಬರುವ ಹಕ್ಕನ್ನು ಕಾನೂನುಬದ್ಧವಾಗಿ ನಾವು ಪಡೆದೇ ಪಡೆಯುತ್ತೇವೆ. ಕೇಂದ್ರ ದಿಂದ ಆದ ಅನ್ಯಾಯವನ್ನು ನಾವು ತಡೆಯುತ್ತೇವೆ ಎಂದು ಹೇಳಿದರು.