ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 45ನೇ ಪೋರ್ಟ್ ವಾರ್ಡಿನ ಸುಭಾಶ್ ನಗರ ಮತ್ತು ಹೊಯಿಗೆ ಬಜಾರ್ ಅಡ್ಡರಸ್ತೆಯ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು 12 ಲಕ್ಷ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಈ ಸಂಬಂಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ನೀಡುತ್ತಿರುವ ಆದ್ಯತೆ ಮತ್ತು ಬೆಂಬಲಕ್ಕಾಗಿ ಸ್ಥಳೀಯರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅಭಿವೃದ್ಧಿ ವಿಚಾರಗಳಿಗೆ ಬಿಜೆಪಿ ಸರಕಾರ ಪರಮೋಚ್ಚ ಆದ್ಯತೆ ನೀಡುತ್ತಿದ್ದು, ಜನರ ಸುಗಮ ಜೀವನಕ್ಕೆ ಎಲ್ಲ ಬಗೆಯ ಅನುಕೂಲಗಳನ್ನು ಒದಗಿಸಿ ಕೊಡುವುದೇ ತಮ್ಮ ಆದ್ಯತೆಯೂ ಆಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರ ಅತಿ ಶೀಘ್ರದಲ್ಲೇ ಹೊಚ್ಚ ಹೊಸ ಕಳೆಯಿಂದ ಕಂಗೊಳಿಸಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಈ ಸಂದರ್ಭದಲ್ಲಿ ನುಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಳೀಯ ಮುಖಂಡರಾದ ನಿತಿನ್ ಕುಮಾರ್, ಅನಿಲ್ ಕುಮಾರ್, ಯೋಗಿಶ್ ಕಾಂಚನ್, ನಿತೇಶ್ ರೈ, ಹೇಮಂತ್, ಪ್ರದೀಪ್ ಶೆಟ್ಟಿ, ಸುರೇಂದ್ರ ಸಾಲಿಯಾನ್, ವಾಸು, ಸೀತಾರಾಂ ಕೋಟ್ಯಾನ್ ಭಾಗವಹಿಸಿದ್ದರು.