ದಕ್ಷಿಣ ಕನ್ನಡ : ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು, ಜಿಲ್ಲೆಗೆ ಆಗಮಿಸುವ ಯಾತ್ರಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ನಗರದ ಎಲ್ಲಾ ಆಟೋ ರಿಕ್ಷಾ ಚಾಲಕರು ಮಾದರಿಯಾಗಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ ಪ್ರಮುಖರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಆಟೋ ರಿಕ್ಷಾ ಚಾಲಕರಿಗೆ ಪೂರಕವಾಗಿ ಸರಕಾರದ ಸವಲತ್ತುಗಳನ್ನು ತಲುಪಿಸುವುದು, ಚಾಲಕರ ಹಿತದೃಷ್ಟಿಯಿಂದ ಅನನ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ರಿಕ್ಷಾ ಚಾಲಕರ ಸಹಕಾರಿ ಸಂಘ ಕುಡ್ಲ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಆಲ್ಫೋನ್ಸ್ ಡಿಸೋಜ ಮಾತನಾಡಿ ಜಾತಿ ಮತ ಬೇಧವಿಲ್ಲದೆ ಎಲ್ಲಾ ವಿಭಾಗದ ಜನರ ಕಷ್ಟಗಳಿಗೂ ತಕ್ಷಣವೇ ಸ್ಪಂದಿಸುವ ಶಾಸಕ ವೇದವ್ಯಾಸ್ ಕಾಮತ್ ಅವರ ನಿಷ್ಪಕ್ಷಪಾತ ಧೋರಣೆಯು ಅವರ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ ಎಂದರು.
ರಿಕ್ಷಾ ಚಾಲಕರಿಗೆ ಕೋವಿಡ್ ಸಂದರ್ಭದಲ್ಲಿ ಜಾತಿ ಭೇದವಿಲ್ಲದೆ ಶಾಸಕರು ಆಹಾರದ ಕಿಟ್ ನೀಡಿದ್ದಾರೆ. ಪಾರ್ಕ್ ರಿಜಿಸ್ಟರ್ ಹಾಗೂ ಪಾರ್ಕ್ ಅಭಿವೃದ್ಧಿಗೆ ಸಹಕಾರ ನೀಡಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷರಾದ ಬಿ. ವಿಷ್ಣು ಮೂರ್ತಿ ಅವರು ಹೇಳಿದರು.
ಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರನ್ನು ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ವಸಂತ್ ಶೆಟ್ಟಿ ಗೀತೆ ಹಾಡಿದರು. ಚಂದ್ರಹಾಸ್ ಕುಲಾಲ್ ನಿರೂಪಿಸಿ ಸತೀಶ್ ಕುಮಾರ್ ಧನ್ಯವಾದ ಸಲ್ಲಿಸಿದರು