ಮಂಗಳೂರು: ಪ್ರತಿಷ್ಠಿತ ಕರ್ಣಾಟಕ ಬ್ಯಾಂಕಿನ ಪ್ರಧಾನ ಕಛೇರಿ, ಮಂಗಳೂರಿನಲ್ಲಿ ಇಂದು ಬ್ಯಾಂಕಿನ ಎಲ್ಲಾ ಪ್ರಾದೇಶಿಕ ಮುಖ್ಯಸ್ಥರು, ವಿವಿಧ ಇಲಾಖೆಯ ಮುಖ್ಯಸ್ಥರು, ಉನ್ನತ ಅಧಿಕಾರಿಗಳನ್ನು ಒಳಗೊಂಡು ಬ್ಯಾಂಕಿನ ಪ್ರಾದೇಶಿಕ ಕಛೇರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಮಹಾಬಲೇಶ್ವರ ಎಂ. ಎಸ್ ಅವರು “ಸತತವಾಗಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಿರುವ ನಮ್ಮ ಬ್ಯಾಂಕ್ ಶತಮಾನೋತ್ಸವದ ಸಂಭ್ರಮಕ್ಕೆ ಸಜ್ಜಾಗಿ ನಿಂತಿದೆ. ಸಾಮಾಜಿಕ ಕಳಕಳಿಗೆ ಬದ್ಧವಾಗಿ ಸುದೃಢ ಆರ್ಥಿಕ ವ್ಯವಹಾರ ಸಂಸ್ಥೆಯಾಗಿ ಕರ್ಣಾಟಕ ಬ್ಯಾಂಕ್ ಹೆಸರುಗಳಿಸಬೇಕೆಂಬ ನಮ್ಮ ಪೂರ್ವಸೂರಿಗಳ ದೂರದೃಷ್ಟಿಗೆ ಅನುಗುಣವಾಗಿ ಇಂದು ಬ್ಯಾಂಕ್ ಬೆಳೆದು ನಿಂತಿದೆ.ಇದು ನಾವು ಬ್ಯಾಂಕಿನ ಸಂಸ್ಥಾಪಕರಿಗೆ ಸಲ್ಲಿಸುವದೊಡ್ಡಗೌರವವಾಗಿದೆ. ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ ತೃತೀಯ ತ್ರೈಮಾಸಿಕದಲ್ಲಿ (31.12.2022)ಬ್ಯಾಂಕಿನ ಸ್ಥೂಲ ಮುಂಗಡಗಳು ಶೇ. 12.37ರಷ್ಟು ತೃಪ್ತಿಕರ ದರದಲ್ಲಿ ವೃದ್ಧಿಗೊಂಡಿವೆ. ಅಂತೆಯೇ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಠೇವಣಿಗಳು ಒಟ್ಟು ಠೇವಣಿಗಳ ಶೇ 31.91ರಷ್ಟು ದಾಖಲಿಸಿದೆ. ಬ್ಯಾಂಕಿನ ಠೇವಣಿಗಳು ರೂ. 84,592.60 ಕೋಟಿಗಳಿಗೆ ತಲುಪಿವೆ. ಗುಣಮಟ್ಟದ ಮುಂಗಡಗಳಲ್ಲಿ ವೃದ್ಧಿ, ಅನುತ್ಪಾದಕ ಸ್ವತ್ತುಗಳ ಮೇಲೆ ನಿಯಂತ್ರಣ, ಕಾಸಾ ಠೇವಣಿಯ ಮೇಲೆ ಹಾಗೂ ಇತರ ಆದಾಯ ಮೂಲಗಳ ಮೇಲೆ ಹೆಚ್ಚಿನ ಗಮನವನ್ನು ನೀಡುವುದರೊಂದಿಗೆ ಗ್ರಾಹಕ ಸ್ನೇಹೀ ಹಾಗೂ ಗ್ರಾಹಕ ಕೇಂದ್ರೀಕೃತ ಡಿಜಿಟಲ್ ಉಪಕ್ರಮಗಳ ಮೂಲಕ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಕರ್ಣಾಟಕ ಬ್ಯಾಂಕ್ ಡಿಜಿಟಲ್ ಬ್ಯಾಂಕ್ ಆಗಿ ಹೊರಹೊಮ್ಮಲಿದೆ”ಎಂದು ನುಡಿದರು.
ಬ್ಯಾಂಕಿನ ಚೀಫ್ ಬಿಸಿನೆಸ್ ಆಫೀಸರ್ ಗೋಕುಲದಾಸ್ ಪೈ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಬ್ಯಾಂಕಿನ ಚೀಫ್ ಆಪರೇಟಿಂಗ್ ಆಫೀಸರ್ ಬಾಲಚಂದ್ರ ವೈ.ವಿ ಅವರು ಭಾಗವಹಿಸಿದ್ದಎಲ್ಲಾ ಪ್ರಾದೇಶಿಕ ಮುಖ್ಯಸ್ಥರಿಂದ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳಿಂದ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಪಡೆದರು. ಜನರಲ್ ಮ್ಯಾನೇಜರ್ ವಿನಯ ಭಟ್ ಪಿ.ಜೆ.ಅವರು ವಿವಿಧ ಪ್ರಾದೇಶಿಕ ಕಛೇರಿಗಳ ಕಾರ್ಯನಿರ್ವಹಣೆಗಳಬಗ್ಗೆ ಮಾಹಿತಿ ನೀಡಿದರು. ಡೆಪ್ಯುಟಿ ಜನರಲ್ ಮ್ಯಾನೇಜರ್ ವಿನಯ ಕುಲಕರ್ಣಿ ವಂದಿಸಿದರು.