ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ ಆಗಿತ್ತು ಎಂದು ಹೇಳಿದೆ. ಅದಲ್ಲದೇ ನಿಮ್ಮ ಸಂಭ್ರಮ ಕ್ಷಣಿಕವಾದುದು, ಸದ್ಯದಲ್ಲೇ ತಕ್ಷ ಪರಿಣಾಮ ಎದುರಿಸಲಿದ್ದೀರಿ ಎಂದು ಎಚ್ಚರಿಕೆ ನೀಡಿದೆ.
ಕುಕ್ಕರ್ ಸ್ಫೋಟದ ವಿಚಾರವಾಗಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆಯ ಪತ್ರಿಕಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಸ್ಟ್ ಜೊತೆ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಆರೋಪಿ ಶಾರೀಕ್ ಫೋಟೋಗಳನ್ನು ಕೂಡ ಅಳವಡಿಸಿ ನವೆಂಬರ್ 23 ರಂದು ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ, ಪೊಲೀಸರು ಈ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದರ ಜೊತೆ ಎಡಿಜಿಪಿ ಅಲೋಕ್ ಕುಮಾರ್ಗೆ ನಿಮ್ಮ ಸಂತೋಷ ಕ್ಷಣಿಕವಾದದ್ದು, ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಸದ್ಯದಲ್ಲಿಯೇ ಅನುಭವಿಸಲಿದ್ದೀರಿ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
“ಕೇಸರಿ ಭಯೋತ್ಪಾದಕರು ಇರುವ ಪ್ರದೇಶ ಮಂಗಳೂರಿನ ಕದ್ರಿಯ ಹಿಂದೂ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸಲು ನಮ್ಮ ಮುಜಾಹಿದ್ ಸಹೋದರ ಮೊಹಮದ್ ಶಾರೀಕ್ ಪ್ರಯತ್ನಿಸಿದ್ದಾನೆ. ಈ ಆಪರೇಷನ್ ನಿಗದಿತ ಗುರಿಯನ್ನು ತಲುಪದಿದ್ದರೂ ಇದನ್ನು ನಾವು ಯಶಸ್ಸು ಎಂದೇ ಪರಿಗಣಿಸುತ್ತೇವೆ. ಏಕೆಂದರೆ, ಇಲ್ಲಿ ಆತ ಅನುಸರಿಸಿರುವ ಕಾರ್ಯತಂತ್ರಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಗಳನ್ನು ಕಣ್ತಪ್ಪಿಸಿ ದಾಳಿ ನಡೆಸುವ ಪ್ರಯತ್ನ ಮಾಡಿರುವುದು ನಮ್ಮ ಯಶಸ್ಸನ್ನು ಹೇಳುತ್ತವೆ. ಆದರೆ, ದಾರಿಯ ಮಧ್ಯೆಯೇ ಬಾಂಬ್ ಸ್ಫೋಟವಾಗಿದ್ದರಿಂದ ನಮ್ಮ ಗುರಿಯನ್ನು ನಾವು ತಲುಪದೇ ನಮ್ಮ ಸಹೋದರ ಶಾರೀಕ್ ಬಂಧನ ಆಗಿದ್ದಾನೆ” ಎಂದು ಐಆರ್ಸಿ ಹೇಳಿದ
“ಇನ್ನು, ಯಾಕೆ ದಾಳಿ ನಡೆಸಿದ್ದೀರಿ ಎಂದು ಪ್ರಶ್ನಿಸುವವರಿಗೆ ನಮ್ಮನ್ನು ಈ ಯುದ್ಧದಲ್ಲಿ ಒತ್ತಾಯಪೂರ್ವಕವಾಗಿ ಬರುವಂತೆ ಮಾಡಿದ್ದಾರೆ. ನಾವು ಸರ್ಕಾರಿ ಪ್ರಾಯೋಜಕತ್ವದ ಭಯೋತ್ಪಾದನೆಗೆ ಪ್ರತಿಕ್ರಿಯೆಯನ್ನು ಮಾತ್ರ ನೀಡುತ್ತಿದ್ದೇವೆ. ಗುಂಪು ಹತ್ಯೆ ಧರ್ಮದ ಕಾನೂನು, ಶಾಸನಗಳ ಮೇಲೆ ದಬ್ಬಾಳಿಕೆ, ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡುತ್ತಾ ಬಹಿರಂಗವಾಗಿ ಯುದ್ಧ ಸಾರಿದ್ದಾರೆ. ನಮ್ಮ ಧರ್ಮದ ಮುಗ್ಧ ಜನ ಜೈಲುಪಾಲಾಗಿದ್ದಾರೆ. ಅದಕ್ಕಾಗಿ ಈ ದಾಳಿ” ಎಂದು ಐಆರ್ಸಿ ಹೇಳಿದೆ.
ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ 10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ.ಮೊದಲು ಮೊಹಮದ್ ಶಾರೀಕ್ ಪಂಪ್ವೆಲ್ ಬಳಿ ಬಾಂಬ್ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು. ಆದರೆ, ಈಗ ಐಆರ್ಸಿ ಹೇಳಿಕೆ ಮೂಲಕ ಕದ್ರಿ ದೇವಸ್ಥಾನ ಉಗ್ರರ ಟಾರ್ಗೆಟ್ ಆಗಿತ್ತು ಎಂಬುದು ಗೊತ್ತಾಗಿದೆ.