ಮಂಗಳೂರು: ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಂಗಳೂರಿಗೆ ಗುರುವಾರ ಬೆಳಗ್ಗೆ ತಲುಪಬೇಕಾಗಿದ್ದ ಸುಮಾರು 12 ಮಂದಿ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿಯಾದ ಘಟನೆ ಮಾ.23ರಂದು ನಡೆದಿದೆ. ಅಗತ್ಯ ಕೆಲಸಗಳಿಗಾಗಿ ಊರಿಗೆ ಬರಬೇಕಾಗಿದ್ದವರು ಮುಂಬೈನಲ್ಲಿ ಬಾಕಿಯಾಗಿ ಇಂಡಿಗೋ ಸಂಸ್ಥೆಗೆ ಹಿಡಿಶಾಪ ಹಾಕುವಂತಾಯಿತು.
ಬಹರೈನ್ನಿಂದ ಬಂದಿದ್ದ ವಿಮಾನ ಮುಂಬೈ ತಲುಪುವಾಗ ಎರಡು ಗಂಟೆ ತಡವಾಗಿದ್ದು ಮತ್ತು ಮುಂಬಯಿಯಿಂದ ಮಂಗಳೂರಿಗೆ ಬರುವ ಕನೆಕ್ಟಿಂಗ್ ವಿಮಾನ 12 ಮಂದಿ ಪ್ರಯಾಣಿಕರನ್ನು ಬಿಟ್ಟೇ ಹಾರಾಟ ನಡೆಸಿದ್ದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ.
ಬಹರೈನ್ನಿಂದ 12 ಮಂದಿ ಪ್ರಯಾಣಿಕರು ಊರಿಗೆ ವಾಪಾಸಾಗಲು ಬುಧವಾರ ರಾತ್ರಿ ಹೊರಡುವ ವಿಮಾನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಎಲ್ಲರೂ ವಿಮಾನ ಹತ್ತಿ ಕುಳಿತಿದ್ದರೂ ಓರ್ವ ಪ್ರಯಾಣಿಕ ಮಾತ್ರ ನಾಪತ್ತೆಯಾಗಿದ್ದ. ಬೋರ್ಡಿಂಗ್ನಲ್ಲಿ ಚೆಕ್ ಇನ್ ಮಾಡಿ ಲಗೇಜ್ ದಾಟಿಸಿದ್ದರೂ ಆತ ಮಾತ್ರ ಕಾಣಿಸಿರಲಿಲ್ಲ. ಬಳಿಕ ಎಲ್ಲ ಕಡೆ ತಪಾಸಣೆ ನಡೆಸಿ ಮೈಕ್ನಲ್ಲಿ ಘೋಷಿಸಿದರೂ ಸಿಗಲಿಲ್ಲ. ಸುಮಾರು ಎರಡು ಗಂಟೆ ಕಾದ ಬಳಿಕ ಆತನ ಲಗೇಜನ್ನು ಕೆಳಗಿಳಿಸಿ ವಿಮಾನ ಮುಂಬಯಿಗೆ ಹೊರಟಿತು.
ಇದರಿಂದ ಮುಂಬಯಿಗೆ ಬೆಳಗ್ಗೆ 5.30ಕ್ಕೆ ತಲುಪಬೇಕಾಗಿದ್ದ ವಿಮಾನ ಎರಡು ಗಂಟೆ ತಡವಾಗಿ 7.30ಕ್ಕೆ ತಲುಪಿದೆ. ಆಗ ಮುಂಬೈನಿಂದ 7.45ಕ್ಕೆ ಮಂಗಳೂರಿಗೆ ಹೊರಡುವ ಇಂಡಿಗೋ ಕನಕ್ಟೆಂಗ್ ವಿಮಾನ ಬಹರೈನ್ನಿಂದ ಬಂದ ವಿಮಾನ ತಡವಾಗಿ ಬಂದಿದೆ ಎನ್ನುವ ವಿಷಯ ತಿಳಿದಿದ್ದರೂ ಕರಾವಳಿ ಬರಬೇಕಾಗಿದ್ದ ಪ್ರಯಾಣಿಕರಿಗೆ ಕನೆಕ್ಟೆಂಗ್ ವಿಮಾನದಲ್ಲಿ ಅವಕಾಶ ಕಲ್ಪಿಸದೆ ನಿಗದಿತ ಸಮಯಕ್ಕೆ ಹೊರಟ ಕಾರಣ ಮಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ಮುಂಬಯಿ ವಿಮಾನ ನಿಲ್ದಾಣದಲ್ಲೇ ಪರದಾಡಬೇಕಾಯಿತು.