ಮೂಡುಬಿದಿರೆ: ಪ್ರಧಾನಮಂತ್ರಿಯವರೊಂದಿಗೆ ಪರೀಕ್ಷಾ ಪೇ ಚರ್ಚಾ, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಸಹಕಾರ ನೀಡದೆ, ನಿರ್ಲಕ್ಷ್ಯ ತನವನ್ನು ತೋರಿಸಿದೆ. ಈ ಕುರಿತು ಮಕ್ಕಳ ಸಹಾಯವಾಣಿ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ಟ್ವಿಟ್ ಮುಖೇನ ದೂರು ಸಲ್ಲಿಸಿದ್ದು, ಪ್ರಧಾನಿ ಕಾರ್ಯಾಲಯದಿಂದ ತನಿಖೆ ನಡೆಸುವ ಭರವಸೆ ಲಭಿಸಿದೆ ಎಂದು ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಿದ್ದ ರೋಟರಿ ಶಾಲೆಯ ವಿದ್ಯಾರ್ಥಿ ಪ್ರಹ್ಲಾದ್ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ನಾಲ್ವರಲ್ಲಿ ನಾನೂ ಭಾಗವಹಿಸಿದ್ದು, ಒಡಿಸ್ಸಾದಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ನಾಟಕ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದೇನೆ. ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ಪರೀಕ್ಷಾಪೇ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು. ಕಲೋತ್ಸವ ಹಾಗೂ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ರಾಜ್ಯವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಭಾಗವಾದ ಡಿಎಸ್ಇಆರ್ಟಿ ವಿಭಾಗ ವಹಿಸಬೇಕಾಗಿತ್ತು.
ನೋಡೆಲ್ ಅಧಿಕಾರಿಗಳು, ಅಧಿಕಾರಿಗಳ ಅಸಮರ್ಪಕ ಸಂವಹನ ಹಾಗೂ ಬೇಜವಾಬ್ದಾರಿ ವರ್ತನೆಯಿಂದಾಗಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ತೀವ್ರ ತೊಂದರೆ ಉಂಟಾಯಿತು. ಬಳಿಕ ಸಂಸದ, ಶಾಸಕ, ಸೇರಿದಂತೆ ಪೇಜಾವರ ಶ್ರೀಗಳ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಅವಕಾಶ ಲಭಿಸಿತು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ತೀವ್ರ ನೋವುಂಟಾಗಿದೆ. ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ದೆಹಲಿಗೆ ತೆರಳಲು ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟದ ಅಧಿಕಾರಿಗಳು ರೈಲ್ವೇ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿದ್ದರು. ಒಂದೇ ಬೋಗಿಯಲ್ಲಿ ಟಿಕೇಟ್ ವ್ಯವಸ್ಥೆ ಮಾಡದೆ ಅಲ್ಲೂ ತೊಂದರೆ ನೀಡಿದ್ದಾರೆ. ಊಟದ ವ್ಯವಸ್ಥೆಯಲ್ಲೂ ಅವ್ಯವಸ್ಥೆ ಮಾಡಿದ್ದಾರೆ ಎಂದು ದೂರಿದರು.
ನಮಗಾದ ಕಹಿ ಅನುಭವ ಇನ್ಯಾವ ವಿದ್ಯಾರ್ಥಿಗಳಿಗೆ ಆಗದಿರಲಿ ಎಂಬ ಸದುದ್ದೇಶದಿಂದ ದೂರು ನೀಡಿರುತ್ತೇನೆ. ದೂರನ್ನು ಹಿಂಪಡೆಯುವತೆ ನೋಡೆಲ್ ಅಧಿಕಾರಿ ಮಹಾದೇವಮ್ಮ ಅವರು ಎಸ್ಕಾರ್ಟ್ ಅಧಿಕಾರಿ ಛಾಯಾ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಹ್ಲಾದ್ಮೂರ್ತಿ ಆರೋಪಿಸಿದರು.
ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ.ಎಂ, ಉಪಾಧ್ಯಕ್ಷ ಅಬ್ದುಲ್ ರವೂಫ್ ವಿವಿಧ ವಿಭಾಗಗಳ ಮುಖ್ಯಸ್ಥರಾದ ಮೋಹನ್ ಭಟ್, ಶೀಲಾ ಕಾಂತರಾಜ್, ರೂಪಾ ಮಸ್ಕರೇನಿಯಸ್, ತಿಲಕ ಅನಂತವೀರ್ ಜೈನ್, ಪ್ರವೀಣ್ ಚಂದ್ರ ಜೈನ್, ಮೋಹನ್ ಹೊಸ್ಮಾರ್, ಸತೀಶ್, ನಿತೀಶ್ ಕುಮಾರ್, ಗಜಾನನ ಮರಾಠೆ ಉಪಸ್ಥಿತರಿದ್ದರು.