ಮಂಗಳೂರು: ಹಿಂದು ಫೈರ್ ಬ್ರಾಂಡ್ ನಾಯಕ, ಉತ್ತರ ಪ್ರದೇಶ ಮಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಬಿ.ಸಿ ರೋಡ್ಗೆ ಮೇ 6ರಂದು ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಿದೆ. ಬಂಟ್ವಾಳದಂತಹ ಕೋಮುಸೂಕ್ಷ್ಮ ಪ್ರದೇಶ ಶಾಸಕ ರಾಜೇಶ್ ಆಡಳಿತದಲ್ಲಿ ಶಾಂತ ವಾತಾವರಣದಲ್ಲಿದೆ. ಈ ನಿಟ್ಟಿನಲ್ಲಿ ಒಂದು ಕಾಲದಲ್ಲಿ ಗೂಂಡಾ ರಾಜ್ಯವೆಂದೇ ಕುಖ್ಯಾತಿ ಪಡೆದಿದ್ದ, ಗ್ಯಾಂಗ್ಸ್ಟಾರ್ಗಳು, ದರೋಡೆಕೋರರ ತಾಣವಾಗಿದ್ದ ಉತ್ತರ ಪ್ರದೇಶದಲ್ಲಿ ಅಕ್ರಮ, ಅವ್ಯವಹಾರಗಳನ್ನು ತಡೆಗಟ್ಟಿ ಬುಲ್ಡೋಜರ್ ಬಾಬಾ ಎಂದೇ ಖ್ಯಾತವಾಗಿರುವ ಯೋಗಿ ಬಿ.ಸಿ. ರೋಡ್ಗೆ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರ ಪ್ರಚಾರ ಉತ್ಸಾಹವನ್ನು ಹೆಚ್ಚಿಸಿದೆ.
ಯೋಗಿ ಅವರ ಕಾರ್ಯಕ್ರಮ ವಿವರ: ಯೋಗಿ ಆದಿತ್ಯನಾಥ್ ಅವರು ಹೆಲಿಕಾಪ್ಟರ್ ಮೂಲಕ ಬಂಟ್ವಾಳ ವಿದ್ಯಾಗಿರಿ ಎಸ್ವಿಎಸ್ ಕಾಲೇಜಿನ ಬಳಿಯ ಹೆಲಿಪ್ಯಾಡ್ಗೆ ಮಧ್ಯಾಹ್ನ 2ಗಂಟೆಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್ ಮೂಲಕ ಕೈಕಂಬ ಪೊಳಲಿ ದ್ವಾರದವರೆಗೆ ತೆರಳಿ ಅಲ್ಲಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರೋಡ್ ಶೋ ನಡೆಸುವರು. ರೋಡ್ ಶೋ ಸಾಗುವ ಹಾದಿಯುದ್ದಕ್ಕೂ ಬ್ಯಾರಿಕೇಡ್ ಹಾಕಲಿದ್ದು, ಅಲ್ಲಲ್ಲಿ ಅಳವಡಿಸಲಾಗುವ ಮೆಟಲ್ ಡಿಟೆಕ್ಟರ್ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ.
ಎಸ್ಪಿಜಿ ತಂಡ: ಭದ್ರತೆಯ ಹಿನ್ನೆಲೆಯಲ್ಲಿ ರೋಡ್ ಶೋ ವಾಹನದ ಹಿಂದೆ-ಮುಂದೆ ಸುಮಾರು 500 ಮಂದಿ ವಿಶೇಷ ಸ್ವಯಂಸೇವಕರು ಬೇರೆ ಯಾರೂ ವಾಹನದತ್ತ ಆಗಮಿಸದಂತೆ ಎಚ್ಚರಿಕೆ ವಹಿಸುವರು. ಜತೆಗೆ ಯೋಗಿ ಅವರ ಭದ್ರತೆಗಾಗಿ ಎಸ್ಪಿಜಿಯ ತಂಡ ಮಂಡ್ಯದಿಂದ ಬಂಟ್ವಾಳಕ್ಕೆ ಆಗಮಿಸಲಿದೆ.
ರಸ್ತೆ ವಾಹನ ಸಂಚಾರ ನಿಷೇಧ ಸಾಧ್ಯತೆ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6ರಂದು ಸಂಜೆ 4 ಕ್ಕೆ ಬಿ.ಸಿ. ರೋಡ್ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು-ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಕೆಲವು ತಾಸುಗಳ ಕಾಲ ವಾಹನ ಸಂಚಾರ ನಿಷೇಧಗೊಳ್ಳುವ ಸಾಧ್ಯತೆ ಇದೆ.
ಬಂಟ್ವಾಳ ಕ್ಷೇತ್ರದಿಂದ 40 ಸಾವಿರಕ್ಕೂ ಅಧಿಕ ಸಂಖ್ಯೆಯ ಯೋಗಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಬಂಟ್ವಾಳ ಕ್ಷೇತ್ರವಲ್ಲದೆ ಪುತ್ತೂರು, ಬೆಳ್ತಂಗಡಿಯಿಂದಲೂ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದೆ.
ಪುರುಷೋತ್ತಮ ಶೆಟ್ಟಿ ವಾಮದಪದವು ಬಿಜೆಪಿ ನಾಯಕರು.