ಮಂಗಳೂರು: ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದರ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಅನಿವಾಸಿ ಕನ್ನಡಿಗರು ದರ ಏರಿಕೆ ಹಿನ್ನೆಲೆಯಲ್ಲಿ ನೆರೆಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು ಆರಂಭಿಸಿದ್ದಾರೆ.
ದರ ಏರಿಕೆ ಹಿನ್ನೆಲೆಯಲ್ಲಿ ನೆರೆಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಚ್ಚಿಕೊಂಡ ಅನಿವಾಸಿ ಕನ್ನಡಿಗರು ಕಣ್ಣೂರಿನಿಂದ ಗಲ್ಫ್ ಪ್ರಯಾಣ ದರ ಕರ್ನಾಟಕಕ್ಕಿಂತ ಅರ್ಧದಷ್ಟು ಕಡಿಮೆ.
ಬಹುತೇಕ ಕೇರಳವನ್ನೇ ನೆಚ್ಚಿಕೊಂಡ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರು
ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದರ ಒಂದೇ ಸಮನೆ ಗಗನಕ್ಕೇರುತ್ತಿದ್ದು, ಅನಿವಾಸಿ ಕನ್ನಡಿಗರಿಗೆ ಈ ದರ ಹೆಚ್ಚಳ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಅದರಲ್ಲೂ ನೆರೆಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣ ದರ ಕರ್ನಾಟಕಕ್ಕಿಂತ ಅರ್ಧದಷ್ಟು ಕಡಿಮೆಯಿದ್ದು, ಇದರಿಂದ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರು ಬಹುತೇಕ ಕೇರಳವನ್ನೇ ನೆಚ್ಚಿಕೊಂಡಿದ್ದಾರೆ.
ಅನಿವಾಸಿ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಪ್ರಯಾಣ ಸಾಧ್ಯವಾಗಿದೆ. ಇದು ಸಾವಿರಾರು ಮಂದಿ ಅನಿವಾಸಿ ಕನ್ನಡಿಗರಿಗೆ ವರದಾನವಾಗಿತ್ತು. ಆದರೆ ಈ ಖುಷಿಗೆ ದರ ಏರಿಕೆ ತಣ್ಣೀರೆರಚಿದ್ದು, ಅನಿವಾಸಿ ಭಾರತೀಯ ಆಕ್ರೋಶಕ್ಕೆ ಕಾರಣವಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಕೇರಳದ ಕಣ್ಣೂರು ಪ್ರಯಾಣಿಕರು ಅಬುಧಾಬಿಯಿಂದ 450 ಧಿರಮ್ (9,700 ರೂ.) ದರದಲ್ಲಿ ಪ್ರಯಾಣಿಸಿದರೆ, ಮಂಗಳೂರಿಗೆ ಎರಡು ಪಟ್ಟು ಹೆಚ್ಚಳ 850 ಧಿರಮ್ (18,350 ರೂ.) ದರ ತೆತ್ತು ಪ್ರಯಾಣಿಸಬೇಕಾಗಿದೆ. ಕೇರಳಕ್ಕೆ ಪ್ರತಿನಿತ್ಯ ವಿಮಾನ ಹಾರಾಟವಿದ್ದರೆ, ಮಂಗಳೂರಿಗೆ ವಾರಕ್ಕೆ ಮೂರು-ನಾಲ್ಕು ದಿನ ಪ್ರಯಾಣ ವ್ಯವಸ್ಥೆ ಇದೆ.
ದಮಾನ್ನಿಂದ ಮಂಗಳೂರಿಗೆ ತಡರಹಿತ ವಿಮಾನಯಾನ ದರ 50 ಸಾವಿರ ರೂ.ಗೆ ತಲುಪಿದ್ದು, ಇದು ಇತರೆಲ್ಲ ರಾಷ್ಟ್ರಗಳ ಪ್ರಯಾಣಕ್ಕಿಂತಲೂ ದುಬಾರಿ. ಕೊಲ್ಲಿ ರಾಷ್ಟ್ರಗಳಲ್ಲಿ ಮಕ್ಕಳಿಗೆ ಎರಡು ತಿಂಗಳ ರಜೆ ಸಿಕ್ಕ ತಕ್ಷಣ ಊರಿಗೆ ಬರುತ್ತಾರೆ. ಆದರೆ ಈ ಬಾರಿ ಟಿಕೆಟ್ ದರ ಹೆಚ್ಚಳವಿರುವ ಕಾರಣ ಕುಟುಂಬಗಳು ಬರಲಾಗದೆ ಹಲವರು ಪ್ರವಾಸವನ್ನೇ ಮೊಟಕುಗೊಳಿಸಿದ್ದಾರೆ ಎನ್ನುತ್ತಾರೆ ಅನಿವಾಸಿ ಕನ್ನಡಿಗ ಉದ್ಯಮಿಗಳು.
ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಇಂತಹ ಸಂದರ್ಭ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಎನ್ಆರ್ಐಗಳ ಅಹವಾಲು, ಸಂಕಷ್ಟಕ್ಕೆ ಸಂದಿಸಲು ಅಗತ್ಯವಿರುವ ಎನ್ಆರ್ಐ ಫೋರಂ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ನೇಮಕವಾಗಿಲ್ಲ.
ಕೋವಿಡ್ ಬಳಿಕ ಅನೇಕ ಅನಿವಾಸಿ ಕನ್ನಡಿಗರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ನಮ್ಮ ನೋವನ್ನು ಕೇಳುವವರೇ ಇಲ್ಲದಂತಾಗಿದೆ. ಶಾಸಕರು, ಸಂಸದರಿಗೆ ಅನಿವಾಸಿಗಳ ನೋವು ಅರ್ಥವಾಗಬೇಕು ಎನ್ನುತ್ತಾರೆ ಅಬುಧಾಬಿಯ ಉದ್ಯಮಿಗಳು.
ಕೇರಳ-ಕರ್ನಾಟಕ ದರ ವ್ಯತ್ಯಾಸದಿಂದಾಗಿ ಕೊಲ್ಲಿ ರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವ ಎನ್ಆರ್ಐಗಳು ಹಣಕಾಸಿನ ಲೆಕ್ಕಾಚಾರದಲ್ಲಿ ಊರಿಗೆ ಬರುತ್ತಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕರ್ನಾಟಕ, ಕಾಸರಗೋಡು ಭಾಗದ ಎನ್ಆರ್ಐಗಳು ನೇರವಾಗಿ ಸಮೀಪದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಟ್ಯಾಕ್ಸಿ ಮೂಲಕ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಮಂಗಳೂರು ನಿಲ್ದಾಣಕ್ಕೆ ಪ್ರಯಾಣಿಕರ ನಷ್ಟ ಮಾತ್ರವಲ್ಲದೆ, ವಿಮಾನ ನಿರ್ವಹಣೆ ಮೇಲೂ ಪರಿಣಾಮ ಬೀರಲಿದೆ. ರಾತ್ರಿ ವೇಳೆಯಲ್ಲಿ ವಿಮಾನ ಸಂಚಾರ ಹೆಚ್ಚಿಸಿದರೆ ಎಲ್ಲ ಪ್ರಯಾಣಿಕರಿಗೂ ಅನುಕೂಲ. ನಮ್ಮ ಭಾಗದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಈ ರೀತಿಯ ಅವ್ಯವಸ್ಥೆಗಳು ಆಗುತ್ತಿವೆ ಎನ್ನುವುದು ಅನಿವಾಸಿ ಕನ್ನಡಿಗರ ಅಳಲು.