ಮಂಗಳೂರು: ಸುರತ್ಕಲ್ ಮಾರುಕಟ್ಟೆ ವಿಚಾರದಲ್ಲಿ ಹಾಲಿ ಶಾಸಕರು ಗುತ್ತಿಗೆದಾರರಿಂದ ಕಮಿಷನ್ ಕೇಳಿ ಕೆಲಸ ನಿಲ್ಲಿಸಲು ಕಾರಣರಾಗಿದ್ದಾರೆಂದು ಮಾಜಿ ಶಾಸಕರು ಗಂಭೀರವಾದ ಆರೋಪ ಮಾಡಿದ್ದಾರೆ.
ಈ ಆರೋಪವನ್ನು ಮಾಜಿ ಶಾಸಕರಾದ ಮೊಯಿದ್ದೀನ್ ಬಾವ ಅವರು ಮಾಡಿದ್ದು ಹಾಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರನ್ನು ಗುರಿಯಾಗಿಸಿದ್ದಾರೆ. ಮಾರುಕಟ್ಟೆ ವಿಚಾರವಾಗಿ ನಾಲ್ಕು ವರ್ಷಗಳಿಂದ ಮಾತನಾಡದಿದ್ದ ಹಾಲಿ ಶಾಸಕರಾದ ಭರತ್ ಶೆಟ್ಟಿಯವರು ಚುನಾವಣೆಗೆ ಮೂರು ತಿಂಗಳಿರುವಾಗ ಸದನದಲ್ಲಿ ಮಾತನಾಡಿದ್ದಲ್ಲದೆ, ಶಾಸಕರು ಮತ್ತು ಸಚಿವರು ಶುದ್ಧ ಸುಳ್ಳನ್ನು ಹೇಳಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆಂದು ಬಾವ ಟೀಕಿಸಿದ್ದಾರೆ.
೨೦೧೭ರ ಬಜೆಟ್ನಲ್ಲಿ ಅಂದಿನ ಮುಖ್ಯಮಂತ್ರಿಯವರು ಎಸ್ಎಫ್ಸಿ ವಿಶೇಷ ಅನುದಾನದಲ್ಲಿ ಸುರತ್ಕಲ್ ಮಾರುಕಟ್ಟೆ ಕಾಮಗಾರಿಗೆ ಮಂಜೂರಾತಿ ನೀಡಿದ್ದರು. ಮನಪಾಕ್ಕೆ ೫೦ ಕೋಟಿ ಬಂದ ಬಳಿಕ ಟೆಂಡರ್ ಅಧಿಕಾರಿಗಳು ಕರೆದಿದ್ದಾರೆ. ಜಾಗದ ಸಮಸ್ಯೆ ಇದ್ದರೆ ಟೆಂಡರ್ ಕರೆಯುವ ಪ್ರಮೇಯವೇ ಇಲ್ಲ. ಆದರೂ ಸದನದಲ್ಲಿ ಶಾಸಕರ ಪ್ರಶ್ನೆಯ ನಾಟಕಕ್ಕೆ ಉತ್ತರದ ನಾಟಕವಾಡಿರುವ ಸಚಿವರಾದ ಬಸವರಾಜ್ ಭೈರತಿಯವರು, ಮಾರುಕಟ್ಟೆಗೆ ಜಾಗದ ಸಮಸ್ಯೆಯಿತ್ತೆಂದೂ, ಹಿಂದಿನ ಸರಕಾರ ತರಾತುರಿಯಲ್ಲಿ ಕಾಮಗಾರಿ ಆರಂಭಿಸಿತ್ತೆಂದೂ, ತಾನು ಎರಡು ಬಾರಿ ಭೇಟಿ ನೀಡಿರುವುದಾಗಿಯೂ ಸದನದಲ್ಲಿ ಸುಳ್ಳು ಹೇಳಿದ್ದಾರೆ. ಅವರು ಎರಡು ಬಾರಿ ಭೇಟಿ ನೀಡಿದ್ದು ಯಾರಿಗೂ ಗೊತ್ತಿಲ್ಲ, ರಾತ್ರಿ ವೇಳೆ ಭೇಟಿ ನೀಡಿದ್ದರೇ ಎಂದು ಪ್ರಶ್ನಿಸಿದ ಬಾವ,
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇದ್ದಾಗ ೧೪ ಕೋಟಿಯ ಕಾಮಗಾರಿ ಆಗಿದೆ. ಇದರಿಂದ ಕಂಗೆಟ್ಟ ಶಾಸಕರು, ಕಮಿಷನ್ಗಾಗಿ ಕೀಟಲೆ ಆರಂಭಿಸಿದ್ದರಿಂದ ಬೇಸತ್ತು ಗುತ್ತಿಗೆದಾರ ಕೆಲಸ ಬಿಟ್ಟು ಹೋಗಿದ್ದಾರೆಂದು ಆರೋಪಿಸಿದ್ದಾರೆ.
ಅಂದು ಬಿಜೆಪಿಯ ಅಧ್ಯಕ್ಷರಾಗಿದ್ದ ಡಾ.ಭರತ್ ಶೆಟ್ಟಿಯವರು ಮಾರುಕಟ್ಟೆ ಅಭಿವೃದ್ಧಿಗೆ ವಿರೋಧಿಸಿ ಪ್ರತಿಭಟಿಸಿದ್ದರು. ಹಿಂದಿನ ಸರಕಾರ ತಪ್ಪು ಮಾಡಿದ್ದರೆ ಅದನ್ನು ನಾಲ್ಕು ವರ್ಷಗಳ ಹಿಂದೆಯೇ ಹೇಳಿದ್ದರೆ ಜನ ನಂಬುತ್ತಿದ್ದರು. ೬೦ ಕೋಟಿಯ ಕಾಮಗಾರಿ ಇದಾಗಿದ್ದು ಈಗ ೮೦ ಕೋಟಿಗೆ ತಲುಪಿಸಿದ್ದಾರೆ. ಈಗಾಗಲೇ ೧೬ಕೋಟಿಯ ಕಾಮಗಾರಿ ಆಗಿದೆ. ಸಚಿವರು ಮತ್ತು ಶಾಸಕರು ಹೊಸಬರಿಗೆ ಗುತ್ತಿಗೆ ಕೊಡಲು ಮುಂದಾಗಿದ್ದಾರೆ. ಇದರಿಂದಾಗಿ ಸರಕಾರಕ್ಕೆ ೩೬ ಕೋಟಿ ನಷ್ಟವುಂಟಾಗಲಿದೆ. ಈ ಶಾಸಕರ ಕರ್ಮಕಾಂಡ ಶೀಘ್ರ ಬಯಲಿಗೆ ತರುತ್ತೇನೆ. ಆಗ ಇಂಥ ಶಾಸಕರಿದ್ದಾರೆಯೇ ಎಂದು ನೀವೇ ಅಚ್ಚರಿಗೊಳ್ಳಬಹುದೆಂದು ಬಾವ ತಿಳಿಸಿದರು.
ಗಣೇಶ್ಪುರ ದೇವಸ್ಥಾನ ರಸ್ತೆ ಅಭಿವೃದ್ಧಿಗೆ ಇಡಲಾಗಿದ್ದ ಹಣವನ್ನು ಶಾಸಕರು ಅಧಿಕಾರಿಗಳನ್ನು ಬಳಸಿ ಇತರ ಕಾಮಗಾರಿಗೆ ವಿನಿಯೋಗಿಸಿ ಕಳಪೆ ಕಾಮಗಾರಿ ಮಾಡಿಸುತ್ತಿದ್ದಾರೆ. ಮಾಜಿ ಸಚಿವರ ಮೂರು ಕೋಟಿಯ ಜಮೀನನ್ನು ಹೌಸಿಂಗ್ ಬೋರ್ಡ್ ೪೧ ಕೋಟಿಗೆ ಖರೀಸಿದೆ. ಈ ಜಮೀನಿನಲ್ಲಿ ನೀರು ನಿಲ್ಲುತ್ತದೆ, ಆದರೂ ದುಬಾರಿ ಬೆಲೆಗೆ ಖರೀದಿಸಿರುವ ಹೌಸಿಂಗ್ ಬೋರ್ಡ್ ಇಲ್ಲಿ ಕಾಮಾಗಾರಿ ನಡೆಸಿಲ್ಲ. ತಾನು ಕ್ಷೇತ್ರಕ್ಕೆ ೧೮೦೦ ಕೋಟಿ ಅನುದಾನ ತಂದಿರುವುದಾಗಿ ಹೇಳುವ ಶಾಸಕರು, ಆ ಬಗ್ಗೆ ಪಟ್ಟಿಯನ್ನು ಕೊಡಲಿ, ಪಟ್ಟಿ ಹಿಡಿದುಕೊಂಡು ತನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಾವ ಸವಾಲು ಹಾಕಿದರು.
ಮುಖಂಡರಾದ ಉಮೇಶ್ ದಂಡಕೇರಿ, ಗಣೇಶ್ ಪೂಜಾರಿ, ಮಲ್ಲಿಕಾರ್ಜುನ, ಚಂದ್ರಹಾಸ, ಫಯಾಝ್ ಹಾಗೂ ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿದ್ದರು.