ಮಂಗಳೂರು: ನನ್ನ ಶಾಸಕ ಅವಧಿಯಲ್ಲಿ ಬೆಂಗ್ರೆ ಪ್ರದೇಶವನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ, ಕಂದಾಯ ಸರ್ವೆ ನಂಬರ್ ಕೊಡಿಸಿದೆ. ಆ ಬಳಿಕ 2400 ಮಂದಿಯಲ್ಲಿ 1500 ಮಂದಿಗೆ ಹಕ್ಕುಪತ್ರ ನೀಡಲಾಗಿತ್ತು. ಈ ಜಾಗಗಳಿಗೆ ಮನಪಾದಿಂದ ಖಾತೆಯನ್ನು ಮಾಡಿಸಲಾಗಿದ್ದು, ಈ ದಾಖಲೆಗಳ ಮೂಲಕ ಸರಕಾರದ ಸೌಲಭ್ಯ, ಮನೆಗಳಿಗೆ ಬ್ಯಾಂಕ್ ಸಾಲವನ್ನು ಕೂಡ ಪಡೆದಿದ್ದಾರೆ. ಇದೀಗ ಶಾಸಕರು ಹಳೆಯ ಹಕ್ಕುಪತ್ರಕ್ಕೆ ಸರ್ವೆ ನಂಬ್ರ ಜೋಡಿಸಿ ನೀಡುತ್ತಿದ್ದಾರೆ ಅಷ್ಟೇ. ಆದರೆ 20 ಮಂದಿಗೆ ಹಕ್ಕು ಪತ್ರ ವಿತರಣೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ. ಆರ್. ಲೋಬೊ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಚುನಾವಣೆ ಸಮೀಪಿಸುತ್ತಿದ್ದಾಗ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗ್ರೆ ವ್ಯಾಪ್ತಿಯಲ್ಲಿ ಹಳೇ ಹಕ್ಕುಪತ್ರಕ್ಕೆ ಸರ್ವೆ ನಂಬರ್ ಸೇರಿಸಿ ನೀಡುತ್ತಿದ್ದು, ದೊಡ್ಡ ಸಾಧನೆ ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ಮಾಜಿ ಶಾಸಕರು ಟೀಕಿಸಿದರು.
ಮೀನುಗಾರರು ಮತ್ತು ಬಂದರು ಅಭಿವೃದ್ಧಿಗೋಸ್ಕರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 2500 ಕೋಟಿ ರೂ. ಅನುದಾನ ತಂದಿದ್ದು, ಅದರಲ್ಲಿ ಮೀನುಗಾರರ ಅಭಿವೃದ್ಧಿಗೆ ಅನುದಾನವನ್ನೇ ಮೀಸಲಿಟ್ಟಿಲ್ಲ. ಮೀನುಗಾರಿಕಾ ಬಂದರು ಅಭಿವೃದ್ಧಿಯಾಗಿಲ್ಲ, 3ನೇ ಹಂತದ ಬಂದರು ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿದೆ. ಮೀನುಗಾರರ ಬಗ್ಗೆ ಕಾಳಜಿಯಿದ್ದರೆ ಸ್ಮಾರ್ಟ್ ಸಿಟಿಯಲ್ಲಿ ಅನುದಾನ ಮಿಸಲಿಡಬೇಕಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆ. ಸಲೀಂ, ಶೇಖರ್ ಸುವರ್ಣ, ಚೇತನ್ ಬೆಂಗ್ರೆ, ನವೀನ್ ಕರ್ಕೇರ, ಸತೀಶ್ ಕೋಟ್ಯಾನ್, ಕವಿತಾ ವಾಸು, ಅಬ್ದುಲ್, ಶರೀಫ್ ಉಪಸ್ಥಿತರಿದ್ದರು.