ಮಂಗಳೂರು: ಭಾರತೀಯ ಜನತಾ ಪಕ್ಷದ ಡಬಲ್ ಎಂಜಿನ್ ಸರಕಾರ ಮಹಿಳೆಯರ ಜೀವನಮಟ್ಟ ಸುಧಾರಣೆಗೆ, ಅವರ ಮಾನ-ಘನತೆಗಳ ರಕ್ಷಣೆಗೆ, ಆರ್ಥಿಕ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ನಾಡಿನ ಹಳ್ಳಿ ಹಳ್ಳಿಗಳಲ್ಲೂ ಕುಟುಂಬ ನಿರ್ವಹಿಸುವ ಮಹಿಳೆಯರು ಸೌಲಭ್ಯಗಳನ್ನು ಪಡೆದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಅವರು ಹೇಳಿದರು.
ಇಂದು ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರೀ ಶಕ್ತಿ ಮಹಾ ಶಕ್ತಿ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಮಾತಿಗೆ ಅನುಗುಣವಾಗಿ ಮಹಿಳೆಯರ ಉನ್ನತಿಗೆ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದರು.
ಮಹಿಳೆಯರ ಜೀವನಮಟ್ಟದ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಜಾರಿಗೊಳಿಸಿದ ಯೋಜನೆಗಳ ಮಾಹಿತಿ ನೀಡಿದರು. ಉಜ್ವಲಾ ಯೋಜನೆಯಡಿ 37 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕ ಒದಗಿಸಲಾಗಿದೆ. ಅಲ್ಲದೆ ಜಲ್ ಜೀವನ್ ಮಿಷನ್ ಅಡಿಯಲ್ಲಿ 43 ಲಕ್ಷಕ್ಕೂ ಹೆಚ್ಚು ನಳ್ಳಿ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ. ಆ ಮೂಲಕ ಅವರ ಶ್ರಮ ಮತ್ತು ಸಮಯದ ಉಳಿತಾಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಕುಗ್ರಾಮಗಳಲ್ಲಿ ತಾಯಂದಿರು ನಿತ್ಯ ಕರ್ಮ ಮುಗಿಸಲು ರಾತ್ರಿಯಾಗುವುದನ್ನು ಕಾಯಬೇಕಿತ್ತು ಅಥವಾ ಮುಂಜಾನೆ ಬೆಳಕು ಹರಿಯುವ ಮೊದಲೇ ಮುಗಿಸಿಕೊಳ್ಳಬೇಕಿತ್ತು. ಅಂತಹ ಸನ್ನಿವೇಶವನ್ನು ತಪ್ಪಿಸಿ ಮಹಿಳೆಯರ ಮಾನ- ಘನತೆಯನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಅಭಿಯಾನ ಜಾರಿಗೊಳಿಸಿದರು. ಸ್ವಚ್ಛ ಭಾರತವೆಂದರೆ ಬರೀ ಕಸಗುಡಿಸುವುದಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳ ಮನೆ ಮನೆಗಳಲ್ಲಿ ಶೇ 100ರಷ್ಟು ಸರಕಾರಿ ಅನುದಾನದೊಂದಿಗೆ ಶೌಚಾಲಯ ನಿರ್ಮಾಣ ಮಾಡಲಾಯಿತು. ಇದು ಬಹಳ ದೊಡ್ಡ ಪ್ರಗತಿಪರ ಬದಲಾವಣೆಯನ್ನು ದೇಶದಲ್ಲಿ ತಂದಿತು ಎಂದು ಧನಲಕ್ಷ್ಮಿ ಗಟ್ಟಿ ವಿವರಿಸಿದರು.
ಆರೋಗ್ಯ, ಜೀವನೋಪಾಯ, ಶಿಕ್ಷಣ ಮತ್ತು ಕಲ್ಯಾಣದಲ್ಲಿ ಉದ್ದೇಶಿತ ಮಧ್ಯಸ್ಥಿಕೆಗಳ ಮೂಲಕ ಜೀವನದ ಗುಣಮಟ್ಟವನ್ನು ಮಹತ್ತರವಾಗಿ ಸುಧಾರಿಸಿದೆ, ಇದು ಪಿಎಂ ಮಾತೃ- ವಂದನಾ ಯೋಜನೆ, ಪಿಎಂ ಸುರಕ್ಷಿತ ಮಾತೃತ್ವ ಅಭಿಯಾನ, ಗೃಹಿಣಿ ಶಕ್ತಿ ಯೋಜನೆಗಳಂತಹ ಯೋಜನೆಗಳ ಮೂಲಕ ಮಹಿಳೆಯರ ಒಟ್ಟಾರೆ ಅಭಿವೃದ್ಧಿಗೆ ಕಾರಣವಾಯಿತು. ಶುಚಿ ಯೋಜನೆಯಡಿ 19 ಲಕ್ಷ ಬಾಲಕಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಲಾಗಿದೆ. ಜನೌಷಷಧಿ ಕೇಂದ್ರಗಳ ಮೂಲಕ ಕೇವಲ 1 ರೂ.ಗೆ ಸ್ಯಾನಿಟರಿ ಪ್ಯಾಡ್ಗಳನ್ನು ಪೂರೈಸಲಾಗುತ್ತಿದೆ; ಅಮೃತ್ ಸೆಲ್ಫ್ ಹೆಲ್ಪ್ ಮೈಕ್ರೋ ಎಂಟರ್ಪ್ರೈಸಸ್ ಪ್ರಾಜೆಕ್ಟ್, ಮುದ್ರಾ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಗಳು ಮಹಿಳೆಯರ ಜೀವನಮಟ್ಟ ಸುಧಾರಣೆಗೆ ನೆರವಾದವು ಎಂದು ಅವರು ವಿವರಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು 1ರಿಂದ 3 ವರ್ಷದೊಳಗಿನ ಮಕ್ಕಳನ್ನು ಉಚಿತವಾಗಿ ಪಾಲನೆ-ಪೋಷಣೆ ಮಾಡಲಾಗುತ್ತಿದೆ. ದುಡಿಯುವ ವರ್ಗದ ತಾಯಂದಿರು ಕೆಲಸಕ್ಕೆ ಹೋಗುವಾಗ ಅವರ ಮಕ್ಕಳನ್ನು ಈ ಕೇಂದ್ರಗಳಲ್ಲಿ ಅತ್ಯಂತ ಕಾಳಜಿಯಿಂದ ಪೋಷಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆ ಅತ್ಯುತ್ತಮವಾಗಿ ನಡೆಯುತ್ತಿದೆ. ಈ ಶಿಶುಪಾಲನಾ ಕೇಂದ್ರಗಳಲ್ಲಿ ಪೋಷಕಾಂಶ ಭರಿತ ಆಹಾರ ನೀಡಲಾಗುತ್ತಿದೆ. ಅಲ್ಲದೆ 15 ಲಕ್ಷಕ್ಕೂ ಹೆಚ್ಚು ಗರ್ಭಿಣಿಯರು ಸಮಗ್ರ ಮತ್ತು ಗುಣಮಟ್ಟದ ಆಹಾರ, ಪೋಷಣೆಯ ಫಲಾನುಭವಿಗಳಾಗಿದ್ದಾರೆ ಎಂದು ಅವರು ನುಡಿದರು.
ಮಿಷನ್ ಇಂದ್ರ ಧನುಷ್ ಯೋಜನೆಯಲ್ಲಿ ಉಚಿತ ಲಸಿಕೆ ಹಾಕಲಾಗಿದೆ. ನಮ್ಮ ಬಾಲ್ಯದ ಕಾಲದಲ್ಲಿ ಸ್ಯಾನಿಟರಿ ಪ್ಯಾಡ್ಗಳು ಶ್ರೀಮಂತರ ಮನೆಯ ಹೆಣ್ಣುಮಕ್ಕಳಿಗೆ ಮಾತ್ರ ಸಿಗುತ್ತಿತ್ತು,. ಇಂದು ಸುವಿಧಾ ನ್ಯಾಪ್ಕಿನ್ಗಳು 1 ರೂ ಬೆಲೆಗೆ ಎಲ್ಲರಿಗೂ ಸಿಗುತ್ತಿವೆ.
* 2019ರಲ್ಲಿ ಭಾಗ್ಯಲಕ್ಷಿ ಯೋಜನೆ 15 ವರ್ಷದ ವರೆಗೆ ವಾರ್ಷಿಕ 3 ಸಾವಿರ ಸಹಾಯ ಧನ 3 ಲಕ್ಷ ಕುಟುಂಬಗಳಿಗೆ ನೀಡುತ್ತಿದೆ.
* ಬಡತನ ರೇಖೆ ಕೆಳಗಿನ ಮಕ್ಕಳಿಗೆ ಭಾಗ್ಯಲಕ್ಷ್ಮಿ ಮಾತ್ರ ಸಿಗುತ್ತದೆ. ಬಿಪಿಎಲ್/ಎಪಿಎಲ್ ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರಕಾರದಿಂದ ನೀಡಲಾಗಿದೆ.
* ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಸರಕಾರವೇ 3,00 ರೂ ಗಳನ್ನು ಮಗುವಿಗೆ 18 ವರ್ಷ ಆಗುವವರೆಗೂ ಭರಿಸುತ್ತಿದೆ.
* ಭಾಗ್ಯಲಕ್ಷ್ಮಿ ಯೋಜನೆ ಮತ್ತು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗಳ ಅನುಷ್ಠಾನದ ನಂತರ ಬಾಲಕಿಯರ ಶಾಲೆ ದಾಖಲಾತಿ ಅನುಪಾತ ಗಣನೀಯವಾಗಿ ಹೆಚ್ಚಿದೆ.
* ಗಂಡು-ಹೆಣ್ಣು ಮಕ್ಕಳ ಅನುಪಾತ ಈಗ 1000: 1040ಕ್ಕೆ ಹೆಚ್ಚಿದೆ. ಇದು ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಕ್ರಮಗಳಿಂದ ಆಗಿದೆ.
* ವಿಧವಾ ವೇತನ ವಿಚ್ಛೇದಿತ ಮಹಿಳೆಯರಿಗೆ ನೀಡುವ ಪಿಂಚಣಿ ಯೋಜನೆ- ಮನಸ್ವಿ ಯೋಜನೆ. ಇದರ ಲಾಭ ಬಹಳಷ್ಟು ತಾಯಂದಿಗೆ ಸಿಗುತ್ತಿದೆ.
* 36 ಲಕ್ಷ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗಿದೆ.
* 6 ತಿಂಗಳ ವೇತನ ಸಹಿತ ಹೆರಿಗೆ ಮತ್ತು ಶಿಶುಪಾಲನಾ ರಜೆ ನೀಡಿರುವುದು ಮಹಿಳೆಯರ ಮಾತೃಶಕ್ತಿಗೆ ಸರಕಾರ ನೀಡಿದ ಗೌರವವಾಗಿದೆ.
* ಸಂಜೀವಿನಿ ನೆಟ್ವರ್ಕ್ ಮೂಲಕ ಸ್ವಸಹಾಯ ಗುಂಪುಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ.
ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಅಗತ್ಯ: ಡಾ. ಮಂಜುಳಾ ರಾವ್
ರಾಜ್ಯ ಪ್ರಶಿಕ್ಷಣ ವರ್ಗದ ಸದಸ್ಯೆ, ಜಿಲ್ಲಾ ಮಹಿಳಾ ಮೋರ್ಚಾ ಸಂಚಾಲಕರಾದ ಡಾ. ಮಂಜುಳಾ ರಾವ್ ಮಾತನಾಡಿ, ಬಿಜೆಪಿ ಸರಕಾರ ಟ್ರಿಪಲ್ ತಲಾಖ್ ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಮುಂದಾಗಿದೆ. ಆದರೆ ಕಾಂಗ್ರೆಸ್ ಇದನ್ನು ವಿರೋಧಿಸಿತ್ತು ಎಂದರು. ಕಾಂಗ್ರೆಸ್ ಸರಕಾರ ಶಾದಿಭಾಗ್ಯದಂತಹ ಯೋಜನೆ ಜಾರಿಗೆ ತಂದು ಮುಸ್ಲಿಂ ತುಷ್ಟಿಕರಣಕ್ಕೆ ಮುಂದಾಗಿತ್ತು. ಲವ್ ಜೆಹಾದ್, ಹಿಜಾಬ್ ಇತ್ಯಾದಿ ಗಳಿಗೆ ಬೆಂಬಲಿಸುವ ಮೂಲಕ ಹಿಂದೂ ವಿರೋಧಿಯಾಗಿ ಗುರುತಿಸಿಕೊಂಡಿತ್ತು ಎಂದರು. ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ ಬಿಜೆಪಿ ಸರಕಾರ ಭಾಗೀರಥಿ ಮುರುಳ್ಯ ಮತ್ತು ಆಶಾ ತಿಮ್ಮಪ್ಪ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿದೆ ಎಂದರು.
ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ದಕ್ಷಿಣ ಕನ್ನಡದಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡಿದೆ. ಬೇರೆ ಯಾವ ಪಕ್ಷಗಳೂ ನೀಡದಿರುವಷ್ಟು ಮಹಿಳಾ ಪ್ರಾತಿನಿಧ್ಯ ಮತ್ತು ಮಹಿಳೆಯರಿಗೆ ಅವಕಾಶಗಳನ್ನು ಬಿಜೆಪಿ ನೀಡಿದ್ದು, ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮಂಜುಳಾ ರಾವ್ ಕರೆ ನೀಡಿದರು.ಇನ್ನಷ್ಟು ಜನ ಮಹಿಳೆಯರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕಿದೆ. ಮಹಿಳೆ ಮನಸ್ಸು ಮಾಡಿದರೆ ದೇಶವನ್ನು, ಸಮಾಜವನ್ನು ಕಟ್ಟಲು ಸಮರ್ಥಳು. ಮಹಿಳಾ ಅಭ್ಯರ್ಥಿಗಳ ಪರವಾಗಿ ಎಲ್ಲ ಮಹಿಳೆಯರೂ ತಮ್ಮ ಮನೆಗಳಿಂದ ಹೊರಬಂದು ಬಿಜೆಪಿ ಸರಕಾರವನ್ನು ತರಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಶಿಕ್ಷಣ ವರ್ಗದ ಸದಸ್ಯೆ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಸಂಚಾಲಕರಾದ ಡಾ. ಮಂಜುಳಾ ರಾವ್, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಹಾಗೂ ಜಿಲ್ಲಾ ಸಂಚಾಲಕಿ ಪೂಜಾ ಪೈ, ಉಪಮೇಯರ್ ಹಾಗೂ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಪೂರ್ಣಿಮಾ ಎಂ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇವಂತಿ ಮತ್ತು ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.